ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಸುರಿದಗುಡುಗು ಸಹಿತ ಮಳೆಗೆ ಸುಮಾರು 200ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಅವುಗಳ ತೆರವು ಕಾರ್ಯಾಚರಣೆಗೆ 750 ಕಾರ್ಮಿಕರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ದೆಹಲಿ ಪಾಲಿಕೆ ನೀಡಿರುವ ಅಂಕಿ–ಅಂಶಗಳ ಪ್ರಕಾರ, ಲುಟಿಯನ್ಸ್ ಪ್ರದೇಶ ಹೊರತುಪಡಿಸಿ, ನಗರದಾದ್ಯಂತ 215 ಮರಗಳು ಉರುಳಿಬಿದ್ದಿವೆ ಎನ್ನಲಾಗಿದೆ.
ಮರಗಳು ಮತ್ತು ಕೊಂಬೆಗಳು ರಸ್ತೆಗಳ ಮೇಲೆ ಬಿದ್ದಿದ್ದರಿಂದ ಸೋಮವಾರ ಸಂಜೆ ಮತ್ತು ಮಂಗಳವಾರ ಬೆಳಗ್ಗೆಯೂ ಸಂಚಾರ ಸಮಸ್ಯೆ ಉಂಟಾಗಿತ್ತು.
ತಲಾ 25 ಕಾರ್ಮಿಕರನ್ನು ಒಳಗೊಂಡ ಸುಮಾರು 30 ವಾಹನಗಳನ್ನು ರಸ್ತೆ ಮೇಲೆ ಉರುಳಿರುವ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಈಗಾಗಲೇ ಹಲವು ರಸ್ತೆಗಳನ್ನು ತೆರವುಗೊಳಿಸಲಾಗಿದೆ. ಬಾಕಿ ಇರುವ ರಸ್ತೆಗಳನ್ನೂ ಇಂದು ಸಂಜೆಯೊಳಗೆ ತೆರವುಗೊಳಿಸಲಾಗುವುದು ಎಂದು ಪಾಲಿಕೆಯ ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.