ನವದೆಹಲಿ:ಆಮ್ಲಜನಕದ ಕೊರತೆಯಿಂದಾಗಿ ಇಲ್ಲಿನ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ 25 ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ. 60 ರೋಗಿಗಳು ಅಪಾಯದಲ್ಲಿದ್ದಾರೆ.
‘ಇನ್ನೆರಡು ಗಂಟೆಗಳಲ್ಲಿ ಈಗಿರುವ ಆಮ್ಲಜನಕ ದಾಸ್ತಾನು ಮುಗಿದು ಹೋಗುತ್ತದೆ. ವೆಂಟಿಲೇಟರ್ಗಳು ಹಾಗೂ ಬಿಐಪಿಎಪಿ ಯಂತ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ‘ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಗಳೂ ಆತಂಕ ವ್ಯಕ್ತಪಡಿಸಿದ್ದಾರೆ.
‘ಇನ್ನೂ 60 ರೋಗಿಗಳು ಅಪಾಯದಲ್ಲಿದ್ದಾರೆ. ಮತ್ತೊಂದು ಬಹುದೊಡ್ಡ ಬಿಕ್ಕಟ್ಟು ಸಂಭವಿಸುವ ಸಾಧ್ಯತೆ ಇದೆ‘ ಎಂದು ಅವರು ಹೇಳಿದ್ದಾರೆ.
‘ಆಸ್ಪತ್ರೆಯ ಅಧಿಕಾರಿಗಳು ಐಸಿಯು ಮತ್ತು ತುರ್ತು ವಿಭಾಗದಲ್ಲಿ ಮಾನವಚಾಲಿತ ವೆಂಟಿಲೇಷನ್ ಆಶ್ರಯಿಸಲು ಪ್ರಯತ್ನಿಸುತ್ತಿದ್ದಾರೆ‘ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ದೆಹಲಿಯಲ್ಲಿರುವ ಈ ಆಸ್ಪತ್ರೆಯಲ್ಲಿ 500ಕ್ಕೂ ಹೆಚ್ಚು ಕೊರೊನಾ ರೋಗಿಗಳು ದಾಖಲಾಗಿದ್ದಾರೆ. ಅದರಲ್ಲಿ 150 ಮಂದಿಗೆ ಹೈ ಫ್ಲೋ ಆಮ್ಲಜನಕದ ನೆರವು ನೀಡಲಾಗಿದೆ.
‘ಗುರುವಾರ ರಾತ್ರಿ 8 ಗಂಟೆಗೆ 5 ಗಂಟೆಗಳು ಪೂರೈಸುವಷ್ಟು ಆಮ್ಲಜನಕವಿತ್ತು. ಇದನ್ನು ರಾತ್ರಿ 1 ಗಂಟೆವರೆಗೂ ರೋಗಿಗಳಿಗೆ ಪೂರೈಸಿದೆವು. ನಂತರ ಆಮ್ಲಜನಕದ ಪೂರೈಕೆ ನಿಧಾನವಾಯಿತು. ತುರ್ತಾಗಿ ಆಮ್ಲಜನಕ ಪೂರೈಸುವಂತೆ ವಿತರಕರಿಗೂ ಮನವಿ ಮಾಡಿದ್ದೆವು‘ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದರು.
ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲಿ ಹಲವಾರು ಖಾಸಗಿ ಆಸ್ಪತ್ರೆಗಳು ಆಮ್ಲಜನಕದ ಕೊರತೆ ಎದುರಿಸುತ್ತಿವೆ.