ನವದೆಹಲಿ: ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ, ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಅವರಿಗೆ ನೀಡಿರುವ ಜಾಮೀನನ್ನು ರದ್ದುಪಡಿಸುವಂತೆ ಕೋರಿ ಗುರುವಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿದೆ.
ಸುಪ್ರೀಂ ಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ತಂಡ (ಎಸ್ಐಟಿ)ವು ಜಾಮೀನು ಕೋರಿ ಆಶಿಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪರಿಣಾಮಕಾರಿ ವಾದ ಮಂಡಿಸಿಲ್ಲ ಎಂದು ವಕೀಲರಾದ ಸಿ.ಎಸ್. ಪಾಂಡಾ ಹಾಗೂ ಶಿವಕುಮಾರ ತ್ರಿಪಾಠಿ ಸಲ್ಲಿಸಿರುವ ಮೇಲ್ಮನವಿಯಲ್ಲಿ ದೂರಲಾಗಿದೆ.
ಜಾಮೀನು ವಿರೋಧಿಸಿ ಎಸ್ಐಟಿ ಪರ ವಕೀಲರು ಪರಿಣಾಮಕಾರಿ ವಾದ ಮಂಡಿಸಲಿಲ್ಲ ಎಂದೂ ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಎಸ್ಐಟಿ ರಚಿಸುವಂತೆ ಕೋರಿ ಇದೇ ವಕೀಲರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಲಖನೌ ಹೈಕೋರ್ಟ್ನ ಅಲಹಾಬಾದ್ ಪೀಠವು ಫೆಬ್ರುವರಿ 10ರಂದು ಆರೋಪಿ ಆಶಿಶ್ಗೆ ಜಾಮೀನು ಮಂಜೂರು ಮಾಡಿತ್ತು. ಬುಧವಾರ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
‘ಪ್ರತಿಭಟನಾನಿರತ ರೈತರ ಮೇಲೆ ವಾಹನ ಹರಿಸಿದ್ದ ಚಾಲಕ, ಸ್ವರಕ್ಷಣೆಗಾಗಿ ವಾಹನದ ವೇಗ ಹೆಚ್ಚಿಸಲು ಪ್ರಯತ್ನಿಸಿರುವ ಸಾಧ್ಯತೆ ಇದ್ದುದರಿಂದ ಈ ಘಟನೆ ನಡೆದಿರಬಹುದು ಎಂಬ ಅಭಿಪ್ರಾಯದೊಂದಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್ನ ನಿರ್ಧಾರವು ಊಹೆಯನ್ನೇ ಆಧರಿಸಿದೆ’ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಎಸ್ಐಟಿಯು ಪಕ್ಷಪಾತಿ ಧೋರಣೆ ಅನುಸರಿಸುವ ಮೂಲಕ ಕೇಂದ್ರ ಸಚಿವರ ನಡೆಯನ್ನು ಪ್ರಶ್ನಿಸಲು ವಿಫಲವಾಗಿದ್ದು, ಜಾಮೀನು ಮಂಜೂರು ಮಾಡಿರುವ ಕ್ರಮವು ಸಮರ್ಥನೀಯವಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವಂತೆ ಕೂಡಲೇ ನಿರ್ದೇಶನ ನೀಡಬೇಕು ಎಂದೂ ಕೋರಲಾಗಿದೆ.
ಸಚಿವ ಮಿಶ್ರಾ ಪುತ್ರನಿದ್ದ ವಾಹನವು ಪ್ರತಿಭಟನಾ ರ್ಯಾಲಿಯಲ್ಲಿ ತೆರಳುತ್ತಿದ್ದವರ ಹಿಂದೆ ವೇಗದಿಂದ ಬಂದು ಡಿಕ್ಕಿ ಹೊಡೆದಿದ್ದರಿಂದ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಜನರ ಸಾವಿಗೀಡಾಗಿದ್ದರು. ಪ್ರಕರಣದ ತನಿಖೆಗಾಗಿ ಪಂಜಾಬ್– ಹರಿಯಾಣ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ರಾಕೇಶಕುಮಾರ್ ಜೈನ್ ನೇತೃತ್ವದ ಎಸ್ಐಟಿಯನ್ನು ಕಳೆದ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ರಚಿಸಿತ್ತು.