ನವದೆಹಲಿ: ತಿಂಗಳ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್'ನ 76ನೇ ಕಂತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ಪ್ರಧಾನಿ ಮೋದಿ ಮಾತಿನ ಮುಖ್ಯಾಂಶಗಳು:
* ಕೋವಿಡ್–19 ಮೊದಲ ಅಲೆಯನ್ನು ಯಶಸ್ವಿಯಾಗಿ ಎದುರಿಸಿದ ಬಳಿಕ ದೇಶದ ಮನೋಬಲ ಹೆಚ್ಚಿತು, ಆದರೆ ಕೋವಿಡ್ನ ಈ ಅಬ್ಬರವೂ ದೇಶವನ್ನೇ ಅಲುಗಾಡಿಸಿದೆ. ಕೋವಿಡ್ನ ಈ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಫಾರ್ಮಾ ವಲಯ, ಆಮ್ಲಜನಕ ಉದ್ಪಾದನೆ ಸೇರಿದಂತೆ ಹಲವು ತಜ್ಞರೊಂದಿಗೆ ನಾನು ಮಾತುಕತೆ ನಡೆಸಿದ್ದೇನೆ.
* ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಯಾರೂ ಸಹ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಜನರನ್ನು ಕೋರುತ್ತೇನೆ. ಭಾರತ ಸರ್ಕಾರವು ಎಲ್ಲ ರಾಜ್ಯ ಸರ್ಕಾರಗಳಿಗೆ ಉಚಿತ ಲಸಿಕೆಗಳನ್ನು ರವಾನಿಸಿರುವುದರ ಬಗ್ಗೆ ನಿಮಗೆಲ್ಲರಿಗೂ ತಿಳಿದಿರಬೇಕು. 45 ವರ್ಷ ಮತ್ತು ಅದಕ್ಕಿಂತಲೂ ಹೆಚ್ಚು ವಯಸ್ಸಿನ ಎಲ್ಲರಿಗೂ ಇದರ ಲಾಭ ಪಡೆಯಬಹುದಾಗಿದೆ. ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗಲಿದೆ.
* ಕೋವಿಡ್–19 ಎದುರು ನಮ್ಮ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರು ಹೋರಾಟ ನಡೆಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಸಾಂಕ್ರಾಮಿಕದ ಕುರಿತು ಅವರು ಹಲವು ರೀತಿಯ ಅನುಭವಗಳನ್ನು ಪಡೆದಿದ್ದಾರೆ.
* ನೋವು ಸಹಿಸುವ ನಮ್ಮ ಸಾಮರ್ಥ್ಯ ಮತ್ತು ತಾಳ್ಮೆಯನ್ನು ಕೋವಿಡ್–19 ಪರೀಕ್ಷಿಸುತ್ತಿದೆ, ಈ ಸಮಯದಲ್ಲಿ ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ನಮ್ಮಲ್ಲಿ ಹಲವು ಜನರ ಆಪ್ತರು ಅಕಾಲಿಕವಾಗಿ ಅಗಲಿದ್ದಾರೆ. ನಮ್ಮ ಮನೋಬಲ ಹೆಚ್ಚಿದ್ದರೂ ಎರಡನೇ ಅಲೆಯು ದೇಶವನ್ನು ಅಲುಗಾಡಿಸಿದೆ.
* ಕೋವಿಡ್–19 ಕುರಿತು ಎಲ್ಲರೂ ಅಧಿಕೃತ (ನಂಬಲಾರ್ಹ) ಮೂಲಗಳಿಂದ ಮಾತ್ರವೇ ಮಾಹಿತಿಯನ್ನು ಪಡೆಯುವಂತೆ ಕೋರುತ್ತೇನೆ. ಹಲವು ವೈದ್ಯರು ಸಾಮಾಜಿಕ ಮಾಧ್ಯಮಗಳ ಮೂಲಕ ಕೋವಿಡ್ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುವುದನ್ನು ನೋಡಿದ್ದೇನೆ, ಕೆಲವರು ಮಾರ್ಗದರ್ಶನವನ್ನೂ ನೀಡುತ್ತಿದ್ದಾರೆ.
* ತಮ್ಮ ಸಿಬ್ಬಂದಿಗೆ ಲಸಿಕೆ ಹಾಕಿಸುವ ಮೂಲಕ ದೇಶದ ಕಾರ್ಪೊರೇಟ್ ವಲಯ ಸಹ ಲಸಿಕೆ ಅಭಿಯಾನದಲ್ಲಿ ಭಾಗಿಯಾಗಬಹುದು. ಭಾರತ ಸರ್ಕಾರದ ಉಚಿತ ಲಸಿಕೆ ಕಾರ್ಯಕ್ರಮವು ಮುಂದಿನ ದಿನಗಳಲ್ಲಿಯೂ ಮುಂದುವರಿಯಲಿದೆ. ಈ ಕಾರ್ಯಕ್ರಮದಡಿ ಹೆಚ್ಚು ಜನರಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರಗಳು ಗಮನಿಸಬೇಕೆಂದು ಮನವಿ ಮಾಡುತ್ತೇನೆ.
* ಕೋವಿಡ್–19 ಹೋರಾಟದಲ್ಲಿ ಆ್ಯಂಬ್ಯುಲೆನ್ಸ್ ಚಾಲಕರ ಕೊಡುಗೆ ಅಪಾರವಾದುದು. ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.