ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶಿಯ ಸಂಸ್ಕೃತಿ ಬಿಂಬಿಸುವ ಸಮಾವೇಶ ಕೇಂದ್ರ: ನಾಳೆ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

Last Updated 14 ಜುಲೈ 2021, 9:31 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶದ ವಾರಾಣಸಿಯ ಹೊರವಲಯದ ಸಿಗ್ರಾ ಪ್ರದೇಶದಲ್ಲಿ ನಿರ್ಮಿಸಿರುವ ‘ರುದ್ರಾಕ್ಷ’ ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರವನ್ನು (ವಿಸಿಸಿ) ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉದ್ಘಾಟಿಸಲಿದ್ದಾರೆ.

ಜಪಾನ್ ಸರ್ಕಾರದ ಸಹಯೋಗದೊಂದಿಗೆ ನಿರ್ಮಿಸಿರುವ ಈ ಕೇಂದ್ರದಲ್ಲಿ 108 ರುದ್ರಾಕ್ಷಗಳನ್ನು ಸ್ಥಾಪಿಸಲಾಗಿದೆ. ಪುರಾತನ ಕಾಶಿಯ ಶ್ರೀಮಂತ ಸಾಂಸ್ಕೃತಿಕ ದೃಶ್ಯಗಳನ್ನು ಅನಾವರಣಗೊಳಿಸುವ ಈ ಕೇಂದ್ರದ ಕಟ್ಟಡದ ಸೂರು ಶಿವಲಿಂಗದ ಆಕಾರದಲ್ಲಿದೆ. ಇಡೀ ಕಟ್ಟಡ ರಾತ್ರಿ ವೇಳೆ ಎಲ್‌ಇಡಿ ದೀಪಗಳಿಂದ ಜಗಮಗಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಐಷಾರಾಮಿ ಸಮಾವೇಶ ಕೇಂದ್ರ ಎರಡು ಅಂತಸ್ತಿನ ಕಟ್ಟಡವಾಗಿದೆ. 2.87 ಹೆಕ್ಟೇರ್‌ ವಿಸ್ತೀರ್ಣದಲ್ಲಿರುವ ಈ ಕೇಂದ್ರ 1200 ಆಸನಗಳ ಸಾಮರ್ಥ್ಯವನ್ನು ಹೊಂದಿದೆ. ‘ಅಂತರರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಚಾರಗಳ ಕುರಿತು ಸಂವಾದ ನಡೆಸಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರಾಣಸಿಯ ಕಲೆ, ಸಂಸ್ಕೃತಿ ಮತ್ತು ಸಂಗೀತವನ್ನು ಪ್ರತಿನಿಧಿಸುವ ಮ್ಯೂರಲ್‌ ಚಿತ್ರಗಳನ್ನೊಳಗೊಂಡ ಗ್ಯಾಲರಿ ಇರುವ ಈ ಕೇಂದ್ರ, ಅಂತರರಾಷ್ಟ್ರೀಯ ಸಮ್ಮೇಳನಗಳು, ಪ್ರದರ್ಶನಗಳು ಮತ್ತು ಸಂಗೀತ ಕಛೇರಿಗಳಂತಹ ಕಾರ್ಯಕ್ರಮಗಳನ್ನು ನಡೆಸಲು ಸೂಕ್ತ ಸ್ಥಳವಾಗಿದೆ. ಈ ಕೇಂದ್ರದ ಮುಖ್ಯ ಸಭಾಂಗಣವನ್ನು ಅಗತ್ಯವೆನಿಸಿದಾಗ, ಸಣ್ಣ ಸಣ್ಣ ಸಭಾಂಗಣಗಳಾಗಿ ವಿಭಜಿಸಲು ಸಾಧ್ಯವಿರುವಂತೆ ನಿರ್ಮಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಇದು ಪರಿಸರ ಸ್ನೇಹಿ ಕಟ್ಟಡವಾಗಿದೆ.

ಅಂತರರಾಷ್ಟ್ರೀಯ ಸಮಾವೇಶ ಕೇಂದ್ರವನ್ನು ಉದ್ಘಾಟಿಸಲು ವಾರಾಣಸಿಗೆ ಆಗಮಿಸುವ ಪ್ರಧಾನಿ ಮೋದಿಯವರು ₹1,500 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT