ನವದೆಹಲಿ: ‘ತಾಲಿಬಾನ್ ನಿಯಂತ್ರಿತ ಅಫ್ಗಾನಿಸ್ತಾನ, ಪಾಕಿಸ್ತಾನ ಹಾಗೂ ಚೀನಾ ನಡುವಿನ ಸಂಭಾವ್ಯ ಮೈತ್ರಿಕೂಟ ಚಿಂತೆಗೆ ಕಾರಣವಾಗಿದೆ. ಈ ಬಗ್ಗೆ ಎಚ್ಚರಿಕೆ ಅಗತ್ಯ’ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ.
‘ಅಫ್ಗಾನಿಸ್ತಾನದಲ್ಲಿನ ವಿದ್ಯಮಾನಗಳ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕಠಿಣ ನಿರ್ಣಯ ಕೈಗೊಂಡಿದ್ದಕ್ಕೆ ಸಂಭ್ರಮಿಸಲು ಕಾಲ ಇನ್ನೂ ಪಕ್ವವಾಗಿಲ್ಲ’ ಎಂದೂ ಅವರು ಹೇಳಿದ್ದಾರೆ.
'ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇಂಥ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನಗೆ ತಾನೇ ಅಭಿನಂದನೆ ಹೇಳಿಕೊಳ್ಳುತ್ತಿದೆ. ಇದು ಈಗ ಅಗತ್ಯ ಇರಲಿಲ್ಲ’ ಎಂದು ಟೀಕಿಸಿದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಆಗಸ್ಟ್ ಅವಧಿಗೆ ಭಾರತ ಅಧ್ಯಕ್ಷೀಯ ಸ್ಥಾನದಲ್ಲಿತ್ತು. ಅಫ್ಗಾನಿಸ್ತಾನದ ನೆಲವನ್ನು ಭಯೋತ್ಪಾದಕರಿಗೆ ಆಶ್ರಯ ನೀಡಲು ಅಥವಾ ಇತರ ದೇಶಗಳಿಗೆ ಬೆದರಿಕೆವೊಡ್ಡಲು ಬಳಸಬಾರದು ಎಂಬುದಾಗಿ ಮಂಡಳಿಯು ಇತ್ತೀಚೆಗೆ ನಿರ್ಣಯವನ್ನು ಅಂಗೀಕರಿಸಿದೆ. ಈ ಹಿನ್ನೆಲೆಯಲ್ಲಿ ಚಿದಂಬರಂ ಅವರ ಹೇಳಿಕೆಗೆ ಮಹತ್ವ ಬಂದಿದೆ.