ಕೋಟ್ಕಾಪುರ ಪ್ರಕರಣ: ದೋಷಾರೋಪ ಪಟ್ಟಿ ಬಗ್ಗೆ ತಮ್ಮದೇ ಸರ್ಕಾರಕ್ಕೆ ಸಿಧು ಪ್ರಶ್ನೆ

ಚಂಡೀಗಡ: ’2015ರ ಕೋಟ್ಕಾಪುರದಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿ ಪ್ರಕರಣದ ತನಿಖೆಯ ದೋಷಾರೋಪ ಪಟ್ಟಿ ಎಲ್ಲಿದೆ’ ಎಂದು ಪಂಜಾಬ್ನ ಕಾಂಗ್ರೆಸ್ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ತಮ್ಮದೇ ಪಕ್ಷದ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಕೋಟ್ಕಾಪುರ ಘಟನೆ ಕುರಿತು ಆರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿತ್ತು. ನ್ಯಾಯಾಲಯ ನೀಡಿದ ಆರು ತಿಂಗಳ ಗಡುವು ಮುಗಿದು ಒಂದು ದಿನವಾಗಿದೆ ಎಂದು ತಿಳಿಸಿದ್ದಾರೆ.
ಕೋಟ್ಕಾಪುರ ಗುಂಡಿನ ದಾಳಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಾಜಿ ಡಿಜಿಪಿ ಸುಮೇಧ್ ಸಿಂಗ್ ಸೈನಿ ಅವರಿಗೆ ನೀಡಿರುವ ಜಾಮೀನಿನ ವಿರುದ್ಧ ವಿಶೇಷ ಅರ್ಜಿಯನ್ನು ಯಾಕೆ ಸಲ್ಲಿಸಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
2015ರಲ್ಲಿ ಫರೀದ್ಕೋಟ್ನಲ್ಲಿ ಗುರು ಗ್ರಂಥ ಸಾಹಿಬ್ ಅನ್ನು ಅಪವಿತ್ರಗೊಳಿಸಿದ್ದನ್ನು ವಿರೋಧಿಸಿ ಅದೇ ವರ್ಷ ಕೋಟ್ಕಾಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಿಖ್ ಸಮುದಾಯದವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಂಜಾಬ್ ಪೊಲೀಸ್ ವಿಶೇಷ ತನಿಖಾ ತಂಡ (ಎಸ್ಐಟಿ) ನಡೆಸಿದ್ದ ತನಿಖೆಯನ್ನು ಹೈಕೋರ್ಟ್ ಏಪ್ರಿಲ್ನಲ್ಲಿ ರದ್ದುಗೊಳಿಸಿತ್ತು.
ಪ್ರಕರಣದ ಕುರಿತು ಐಪಿಎಸ್ ಅಧಿಕಾರಿ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ನೇತೃತ್ವದ ಎಸ್ಐಟಿ ತಂಡ ನಡೆಸಿದ ತನಿಖೆಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ಹೈಕೋರ್ಟ್ ಆದೇಶದ ಅನ್ವಯ ಪ್ರಕರಣದ ಮರು ತನಿಖೆಗಾಗಿ ಮೇ 7ರಂದು ಹೊಸದಾಗಿ ಎಸ್ಐಟಿ ತಂಡವನ್ನು ರಚಿಸಲಾಗಿತ್ತು. ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎಲ್.ಕೆ. ಯಾದವ್ ನೇತೃತ್ವದ ಹೊಸ ಎಸ್ಐಟಿ ತಂಡ ಕೋಟ್ಕಾಪುರ ಗುಂಡಿನ ದಾಳಿ ಪ್ರಕರಣದ ತನಿಖೆ ನಡೆಸುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.