ರಾಯಪುರ: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ 76ರಷ್ಟು ಮೀಸಲಾತಿ ಏರಿಕೆ ಮಾಡುವಛತ್ತೀಸಗಢ ಸರ್ಕಾರದ ಕ್ರಮವು ರಾಜಕೀಯ ಪ್ರೇರಿತವಾಗಿದ್ದು, ಇದು ನ್ಯಾಯಾಲಯದಲ್ಲಿ ನಿಲ್ಲದು ಎಂದು ರಾಜಕೀಯ ಹಾಗೂ ಕಾನೂನು ತಜ್ಞರು ವಿಶ್ಲೇಷಿಸಿದ್ದಾರೆ.
ಛತ್ತೀಸಗಡ ಹೈಕೋರ್ಟ್ ಈಗಾಗಲೇ ಮೀಸಲಾತಿಯ ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚು ಮಾಡುವಂತಿಲ್ಲ ಎಂದು ಎರಡು ಬಾರಿ ಹೇಳಿದೆ. ಮತ್ತೀಗ ಅದೇ ಮಾತು ಪುನರುಚ್ಚರಿಸುವ ಸಾಧ್ಯತೆ ಇದೆ ಎಂದೂ ತಜ್ಞರು ಹೇಳಿದ್ದಾರೆ.
ಪರಿಶಿಷ್ಟ ಪಂಗಡದ (ಎಸ್.ಟಿ) ಅಭ್ಯರ್ಥಿಗಳಿಗೆ ಮೀಸಲಾಗಿರುವ ಭಾನುಪ್ರತಾಪ್ಪುರ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ನಡೆಯಲಿರುವ ಉಪಚುನಾವಣೆಗೂ ಮುನ್ನ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ.
ರಾಜ್ಯದ ವಿವಿಧ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರಿ ಉದ್ಯೋಗದಲ್ಲಿ ನೇಮಕ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಸಂಬಂಧಿಸಿದ ಎರಡು ತಿದ್ದುಪಡಿ ಮಸೂದೆಗಳನ್ನು ಛತ್ತೀಸಗಡ ವಿಧಾನಸಭೆ ಶುಕ್ರವಾರ ಅಂಗೀಕರಿಸಿದ್ದು, ಒಟ್ಟು ಮೀಸಲಾತಿಯ ಪ್ರಮಾಣವನ್ನು ಶೇ 76ಕ್ಕೆ ಏರಿಕೆ ಮಾಡಿದೆ.