ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯ ತಡೆಗಟ್ಟಲು ಜಾರಿಗೊಳಿಸಲಾಗಿರುವ ನಿರ್ಬಂಧಗಳು ಭಾನುವಾರ ಕೊನೆಗೊಳ್ಳುತ್ತಿರುವ ಕಾರಣ, ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್ ಅವರು ಸೋಮವಾರ (ನ.22) ಪರಿಶೀಲನಾ ಸಭೆ ನಡೆಸಲಿದ್ದಾರೆ.
‘ಈ ಉನ್ನತ ಮಟ್ಟದ ಸಭೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳುವರು’ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ದೆಹಲಿಯಲ್ಲಿ ವಾಯುಮಾಲಿನ್ಯ ತಡೆಗಟ್ಟುವ ಸಂಬಂಧ ಸರ್ಕಾರ ಕಳೆದ ಬುಧವಾರ ಹಲವಾರು ನಿರ್ಬಂಧಗಳನ್ನು ಜಾರಿಗೊಳಿಸಿತ್ತು. ಅಗತ್ಯವಲ್ಲದ ವಸ್ತುಗಳನ್ನು ಸಾಗಿಸುವ ಟ್ರಕ್ಗಳು ದೆಹಲಿ ಪ್ರವೇಶಿಸುವುದರ ಮೇಲೆ ನಿಷೇಧ ಹೇರಲಾಗಿತ್ತು. ಮುಂದಿನ ಆದೇಶದ ವರೆಗೆ ಶಾಲಾ–ಕಾಲೇಜುಗಳನ್ನು ಬಂದ್ ಮಾಡಲು ಸೂಚಿಸಲಾಗಿತ್ತು.
ನ. 21ರ ವರೆಗೆ ಕಟ್ಟಡಗಳ ನಿರ್ಮಾಣ ಹಾಗೂ ನೆಲಸಮಗೊಳಿಸುವ ಚಟುವಟಿಕೆಗಳ ಮೇಲೆ ನಿಷೇಧ ಹೇರಲಾಗಿತ್ತು. ಭಾನುವಾರದವರೆಗೆ ನೌಕರರು ಮನೆಯಿಂದಲೇ ಕಚೇರಿ ಕೆಲಸ ಮಾಡುವಂತೆಯೂ ದೆಹಲಿ ಸರ್ಕಾರ ಆದೇಶಿಸಿತ್ತು.