ನವದೆಹಲಿ: ಗಣರಾಜ್ಯೋತ್ಸವ ಕಾರಣದಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಜ.20ರಿಂದ ‘ಮಾನವ ರಹಿತ ವೈಮಾನಿಕ ವಾಹನಗಳು’ (ಯುಎವಿ), ಪ್ಯಾರಾಗ್ಲೈಡರ್ಸ್ ಹಾಗೂ ಹಾಟ್ ಏರ್ ಬಲೂನ್ಗಳಂತಹ ವೈಮಾನಿಕ ಸಾಧನಗಳ ಹಾರಾಟ ನಡೆಸುವುದನ್ನು ನಿರ್ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಪೊಲೀಸ್ ಆಯುಕ್ತ ರಾಕೇಶ್ ಅಸ್ಥಾನಾ ಅವರು ಈ ಸಂಬಂಧ ಹೊರಡಿಸಿರುವ ಆದೇಶ ಫೆಬ್ರುವರಿ 15ರ ವರೆಗೆ ಜಾರಿಯಲ್ಲಿರುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಕೆಲ ದುಷ್ಕರ್ಮಿಗಳು, ಸಮಾಜಘಾತುಕ ಶಕ್ತಿಗಳು ಅಥವಾ ಉಗ್ರರಿಂದ ದಾಳಿಯ ಸಾಧ್ಯತೆ ಇದ್ದು, ಇದರಿಂದ ಸಾರ್ವಜನಿಕರು, ಗಣ್ಯರು ಹಾಗೂ ಆಸ್ತಿಗಳ ಸುರಕ್ಷತೆಗೆ ಅಪಾಯವಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.