ಚಂಡಿಗಡ: ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಹಿಂಸಾಚಾರದ ವೇಳೆ ಕೆಂಪುಕೋಟೆಯ ಮೇಲೆ ಧಾರ್ಮಿಕ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಗೆ ಸಹಕರಿಸುವುದಾಗಿ ನಟ ದೀಪ್ ಸಿಧು ತಿಳಿಸಿದ್ದಾರೆ.
‘ಸತ್ಯವನ್ನು ಹೊರ ತರಲು ಸ್ವಲ್ಪ ಸಮಯ ಬೇಕಾಗುತ್ತದೆ. ಆನಂತರ ನಾನು ತನಿಖೆಗೆ ಸಹಕರಿಸುತ್ತೇನೆ‘ ಎಂದು ಸಿಧು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.
‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿದೆ. ಲುಕ್ ಔಟ್ ನೋಟಿಸ್ ನೀಡಲಾಗಿದೆ. ಮೊದಲು ನಾನು ತನಿಖೆಗೆ ಸಹಕರಿಸುತ್ತೇನೆ‘ ಎಂದು ಸಿಧು ವಿಡಿಯೊದಲ್ಲಿ ತಿಳಿಸಿದ್ದಾರೆ.
‘ಸತ್ಯವನ್ನು ಹೊರತರಲು ಸಮಯ ಹಿಡಿಯುತ್ತದೆ. ಏಕೆಂದರೆ ಈಗಾಗಲೇ ಸುಳ್ಳು ಮಾಹಿತಿಯನ್ನು ಹರಡಿ ಜರನ್ನು ದಾರಿ ತಪ್ಪಿಸಲಾಗಿದೆ. ಆದ್ದರಿಂದ ಸತ್ಯವನ್ನು ಹೊರ ತರಲು ಒಂದೆರಡು ದಿನಗಳು ಬೇಕಾಗುತ್ತವೆ‘ ಎಂದು ಅವರು ಹೇಳಿದ್ದಾರೆ.
‘ಹೀಗೆ ಹರಿದಾಡುತ್ತಿರುವ ವದಂತಿಗಳಿಗೆ ಯಾವುದೇ ವಾಸ್ತವಾಂಶಗಳು ಇರುವುದಿಲ್ಲ. ನನಗೆ ಎರಡು ದಿನ ಸಮಯ ನೀಡಿದರೆ ಸತ್ತಾಂಶವನ್ನು, ಸಾಕ್ಷ್ಯಗಳ ಸಹಿತ ಸಂಗ್ರಹಿಸಿ ತರುತ್ತೇನೆ‘ಎಂದು ಹೇಳಿದ್ದಾರೆ.
ಟ್ರ್ಯಾಕ್ಟರ್ ರ್ಯಾಲಿ ವೇಳೆ ಕೆಂಪುಕೋಟೆಯ ಮೇಲೆ ಧಾರ್ಮಿಕ ಧ್ವಜ ಹಾರಿಸಿದ ಪ್ರಕರಣದಲ್ಲಿ ದೆಹಲಿ ಪೊಲೀಸರು ಸಿಧು ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.