ತಿರುವನಂತಪುರ: ವಿಳಿಂಞ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 3,000 ಮಂದಿಯ ವಿರುದ್ಧ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅದಾನಿ ಬಂದರು ನಿರ್ಮಾಣ ವಿರೋಧಿಸಿ ಚರ್ಚ್ ನೇತೃತ್ವದ ಉದ್ರಿಕ್ತರ ಗುಂಪು ಪೊಲೀಸ್ ಠಾಣೆ ಮೇಲೆ ಭಾನುವಾರ ರಾತ್ರಿ ದಾಳಿ ನಡೆಸಿದ ಪರಿಣಾಮ 40 ಮಂದಿ ಪೊಲೀಸರು ಗಾಯಗೊಂಡಿದ್ದರು.
‘ಪೊಲೀಸರು ವಶಕ್ಕೆ ಪಡೆದಿದ್ದ ಆರೊಪಿಗಳನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ 3,000 ಮಂದಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪೊಲೀಸ್ ವಾಹನಗಳಿಗೆ ಹಾಗೂ ಠಾಣೆಗೆ ಹಾನಿ ಎಸಗಿದ್ದಾರೆ’ ಎಂದು ಪೊಲೀಸರು ಎಫ್ಐಆರ್ನಲ್ಲಿ ಹೇಳಿದ್ದಾರೆ.
‘ಜನರ ಗುಂಪು ಕಟ್ಟಿಗೆ ಮತ್ತು ಇಟ್ಟಿಗೆಯಿಂದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದೆ’ ಎಂದಿದ್ದಾರೆ.
ಪ್ರತಿಭಟನಕಾರರು ಮಾಧ್ಯಮ ಪ್ರತಿನಿಧಿಗಳ ಮೇಲೂ ಹಲ್ಲೆ ನಡೆಸಿದ್ದಾರೆ ಎಂದೂ ಆರೋಪಿಸಲಾಗಿದೆ.
‘ಬಾಹ್ಯ ಶಕ್ತಿಗಳ ಕೈವಾಡ’: ವಿಳಿಂಞ ಪೊಲೀಸ್ ಠಾಣೆ ಮೇಲೆ ನಡೆದಿರುವ ದಾಳಿಯ ಹಿಂದೆ ‘ಬಾಹ್ಯ ಶಕ್ತಿಗಳ’ ಕೈವಾಡವಿದೆ ಎಂದು ಲ್ಯಾಟಿನ್ ಕೆಥೋಲಿಕ್ ಚರ್ಚ್ ಆರೋಪಿಸಿದೆ. ಈ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದೂ ಆಗ್ರಹಿಸಿದೆ.
ಬಂದರು ನಿರ್ಮಾಣ ವಿರೋಧಿ ಪ್ರತಿಭಟನೆಯುಲ್ಯಾಟಿನ್ ಕೆಥೋಲಿಕ್ ಚರ್ಚ್ ನೇತೃತ್ವದಲ್ಲಿ ನಡೆದಿತ್ತು.
‘ಸರ್ಕಾರವು ಇದುವರೆಗೆ ಬಹಳ ತಾಳ್ಮೆಯಿಂದ ವರ್ತಿಸಿದೆ. ಆದರೆ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿರುವುದು ಸ್ವೀಕಾರಾರ್ಹವಲ್ಲ’ ಎಂದು ಕೇರಳದ ಬಂದರು ಸಚಿವ ಅಹಮ್ಮದ್ ದೇವರಕೋವಿಲ್ ಹೇಳಿದ್ದಾರೆ.