ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಮಸೂದೆಗಳಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ರಾಷ್ಟ್ರೀಯ ಜನತಾ ದಳದ (ಆರ್ಜೆಡಿ) ರಾಜ್ಯಸಭಾ ಸದಸ್ಯ ಮನೋಜ್ ಝಾ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಮಸೂದೆಗಳು ರೈತರ ಮರಣ ಶಾಸನವಾಗಿದ್ದು, ರೈತರನ್ನು ಕಾರ್ಪೊರೇಟ್ ಕಂಪನಿಗಳ ಅಡಿಯಾಳುಗಳನ್ನಾಗಿಸಲು ನೆರವಾಗಲಿವೆ ಎಂದು ವಕೀಲ ಫೌಜಿಯಾ ಶಕೀಲ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ಅವರು ದೂರಿದ್ದಾರೆ.
ಕೇರಳದ ಕಾಂಗ್ರೆಸ್ ಲೋಕಸಭಾ ಸದಸ್ಯ ಟಿ.ಎನ್.ಪ್ರತಾಪನ್ ಹಾಗೂ ಡಿಎಂಕೆ ರಾಜ್ಯಸಭಾ ಸದಸ್ಯ ತಿರುಚಿ ಶಿವಾ ಅವರೂ ಈ ಮಸೂದೆಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
‘ಈ ಮಸೂದೆಗಳು ಕೃಷಿಯನ್ನು ಸಾಂಸ್ಥಿಕಗೊಳಿಸಲಿವೆ. ರೈತರಿಗೆ ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳ ಜೊತೆ ವ್ಯವಹಾರ ನಡೆಸುವಷ್ಟು ಅರಿವು ಇರುವುದಿಲ್ಲ. ಇದರಿಂದಾಗಿ ಕಾರ್ಪೊರೇಟ್ ಸಂಸ್ಥೆಗಳು ಕೃಷಿ ಕ್ಷೇತ್ರದಲ್ಲಿ ಏಕಸ್ವಾಮ್ಯ ಸಾಧಿಸುವ ಅಪಾಯವಿದೆ’ ಎಂದೂ ಝಾ ಅರ್ಜಿಯಲ್ಲಿ ದೂರಿದ್ದಾರೆ.
‘ಈ ಮಸೂದೆಗಳನ್ನು ಅಂಗೀಕರಿಸುವಾಗಆಡಳಿತರೂಢ ಸರ್ಕಾರವು ಸಂಸದೀಯ ನಿಯಮಗಳನ್ನು ಗಾಳಿಗೆ ತೂರಿದೆ. ಈ ಮಸೂದೆಗಳು ಸಂವಿಧಾನದ ಮೂಲಭೂತ ಆಶಯಗಳಿಗೆ ವಿರುದ್ಧವಾಗಿದೆ’ ಎಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.