ಜೌನ್ಪುರ: ‘ಉತ್ತರಪ್ರದೇಶದ ವಾರಾಣಸಿ–ಜೌನ್ಪುರ ಹೆದ್ದಾರಿಯ ಜಲಾಲ್ಪುರ ಬಳಿ ಎರಡು ವಾಹನಗಳ ನಡುವೆ ಸಂಭವಿಸಿದ ಢಿಕ್ಕಿಯಿಂದಾಗಿ ಆರು ಜನರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
‘ವಾರಾಣಸಿಯಲ್ಲಿ ಅಂತ್ಯಕ್ರಿಯೆಗೆಂದು ತೆರಳಿದ್ದ 17 ಮಂದಿ ಜೀಪ್ವೊಂದರಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಜೀಪ್ ಮತ್ತು ಟ್ರಕ್ ನಡುವೆ ಢಿಕ್ಕಿ ಸಂಭವಿಸಿದೆ.ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ’ ಎಂದು ಅವರು ಹೇಳಿದರು.
ಸಾವಿಗೀಡಾದವರನ್ನು ಅಮರ್ ಬಹದ್ದೂರ್ ಯಾದವ್(58), ರಾಮ್ ಸಿಂಗಾರ್ ಯಾದವ್(38), ಮುನ್ನಿಲಾಲ್(38), ಇಂದ್ರಜೀತ್ ಯಾದವ್(48), ಕಮಲಾ ಪ್ರಸಾದ್ ಯಾದವ್(60) ಮತ್ತು ರಾಮ್ಕುಮಾರ್(65) ಎಂದು ಗುರುತಿಸಲಾಗಿದೆ.
‘ಜಲಾಲ್ಪುರದ ನಿವಾಸಿ ದಾಂಡೇ ದೇವಿ(122) ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಗಾಗಿ ಅಳಿಯ ಲಕ್ಷ್ಮೀ ಶಂಕರ್ ಯಾದವ್ ಅವರು 17 ಮಂದಿಯೊಂದಿಗೆ ವಾರಾಣಸಿಯ ಮಣಿಕರ್ಣಿಕಾ ಘಾಟ್ಗೆ ತೆರಳಿದ್ದರು’ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ಅವರು ಮಾಹಿತಿ ನೀಡಿದರು.
‘ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಕ್ಷಣಾ ಸಿಬ್ಬಂದಿ ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದರು. ಆದರೆ ಈ ವೇಳೆ ಟ್ರಕ್ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದ’ ಎಂದು ಅವರು ತಿಳಿಸಿದರು.