ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ತಿನಲ್ಲಿ ಗದ್ದಲ: ನಡೆಯದ ಕಲಾಪ

ಉಭಯ ಸದನಗಳಲ್ಲಿ ಪ್ರತಿಭಟನೆ; ಅದಾನಿ ಸಮೂಹದ ವಿರುದ್ಧ ಜೆಪಿಸಿ ತನಿಖೆಗೆ ವಿರೋಧ ಪಕ್ಷಗಳ ಆಗ್ರಹ
Last Updated 29 ಮಾರ್ಚ್ 2023, 18:46 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅನರ್ಹತೆ ಖಂಡಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ್ದರಿಂದ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪಗಳು ಬುಧವಾರವೂ ಸುಗಮವಾಗಿ ನಡೆಯಲಿಲ್ಲ. ಗದ್ದಲದ ನಡುವೆಯೇ ಸ್ಪರ್ಧಾ (ತಿದ್ದುಪಡಿ) ಮಸೂದೆಗೆ ಲೋಕಸಭೆಯಲ್ಲಿ ಯಾವುದೇ ಚರ್ಚೆ ಇಲ್ಲದೆ ಅಂಗೀಕಾರ ಸಿಕ್ಕಿತು.

ಲೋಕಸಭೆಯಲ್ಲಿ, ಕಪ್ಪು ದಿರಿಸಿನಲ್ಲಿ ಪ್ರತಿಪಕ್ಷಗಳ ಸದಸ್ಯರು ಸ್ಪೀಕರ್ ಪೀಠದ ಎದುರು ಘೋಷಣೆಗಳನ್ನು ಕೂಗಿದರು. ಅದಾನಿ ಸಮೂಹದ ಷೇರುಗಳ ಮೌಲ್ಯ ತಿರುಚಿದ ಆರೋಪವನ್ನು ಜಂಟಿ ಸಂಸದೀಯ ಸಮಿತಿ ತನಿಖೆಗೆ ಒಳಪಡಿಸಬೇಕು ಎಂದು ವಿರೋಧ ಪಕ್ಷಗಳ ಸಂಸದರು ಒತ್ತಾಯಿಸಿದರು. ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಮಧ್ಯಾಹ್ನವೂ ಗದ್ದಲ ಮುಂದುವರೆದ ಕಾರಣ ಕಲಾಪವನ್ನು ದಿನದಮಟ್ಟಿಗೆ ಮುಂದೂಡಲಾಯಿತು.

ರಾಜ್ಯಸಭೆಯಲ್ಲೂ ಇದೇ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಸದಸ್ಯರು ಘೋಷಣೆ ಕೂಗಿದರು. ಗದ್ದಲದ ನಡುವೆಯೇ ಅರಣ್ಯ ಸಂರಕ್ಷಣೆ (ತಿದ್ದುಪಡಿ) ಮಸೂದೆಯ ಜಂಟಿ ಸಂಸದೀಯ ಸಮಿತಿಗೆ ಸದಸ್ಯರನ್ನು ನೇಮಿಸುವ ಗೊತ್ತುವಳಿಯನ್ನು ಮಂಡಿಸಲು ಸಚಿವ ಭೂಪೇಂದ್ರ ಯಾದವ್ ಅವರಿಗೆ ಸಭಾಪತಿ ಜಗದೀಪ್ ಸೂಚಿಸಿದರು. ಯಾದವ್ ಅವರು ಸದಸ್ಯರ ಹೆಸರನ್ನು ಪ್ರಕಟಿಸಿ
ದರು. ಈ ಬಳಿಕ ಸದನವನ್ನು ಮುಂದೂಡ
ಲಾಯಿತು. ಗುರುವಾರ, ಶುಕ್ರವಾರ ರಜೆ ಇರುವ ಕಾರಣ, ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

***

‘ನಮ್ಮ ಮನೆಗೆ ಬನ್ನಿ’ ಎಂದು ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್

ನಿಮ್ಮ ಸೂಚನೆಯಂತೆ ಸರ್ಕಾರಿ ಬಂಗಲೆ ತೆರವು ಮಾಡುತ್ತೇನೆ ಎಂದು ಲೋಕಸಭಾ ಕಾರ್ಯಾಲಯಕ್ಕೆ ಪತ್ರ ಬರೆದ ರಾಹುಲ್‌ ಗಾಂಧಿ ಅವರು ನಮ್ಮ ಮನೆಗೆ ಬರಲಿ ಎಂದು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಆಹ್ವಾನ ನೀಡಿದ್ದಾರೆ. ‘ನಮ್ಮ ಮನೆಗೆ ಬನ್ನಿ’ ಎಂದು ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ರಾಹುಲ್‌ಗೆ ಬುಧವಾರ ಆಹ್ವಾನ ನೀಡಿದ್ದಾರೆ. ಆದರೆ ಮಂಗಳವಾರ ಸಂಜೆಯಿಂದಲೇ ಕಾರ್ಯಕರ್ತರು ಮತ್ತು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ, ‘ನನ್ನ ಮನೆ, ನಿಮ್ಮದೇ ಮನೆ’ ಎಂಬ ಅಭಿಯಾನ ಆರಂಭಿಸಿದ್ದಾರೆ.

ಲೋಕಸಭೆ ಕಾರ್ಯಾಲಯಕ್ಕೆ ರಾಹುಲ್ ಅವರು ಬರೆದ ಪತ್ರದ ಪ್ರತಿ ಟ್ವಿಟರ್‌ನಲ್ಲಿ ಮಂಗಳವಾರ ಲಭ್ಯವಾದ ಬೆನ್ನಲ್ಲೇ ತೆಲಂಗಾಣ ಕಾಂಗ್ರೆಸ್‌ ಅಧ್ಯಕ್ಷ ರೇವಂತ್ ರೆಡ್ಡಿ ಅವರು, ‘ನನ್ನ ಮನೆ, ನಿಮ್ಮದೇ ಮನೆ (ಮೇರಾ ಘರ್, ಆಪ್‌ಕಾ ಘರ್‌)’ ಎಂದು ಟ್ವೀಟ್‌ ಮಾಡಿದ್ದರು. ಕೆಲವೇ ಗಂಟೆಗಳಲ್ಲಿ ಈ ಟ್ವೀಟ್‌, ‘#MeraGharAapkaGhar’ ಹ್ಯಾಷ್‌ಟ್ಯಾಗ್‌ನ ರೂಪ ಪಡೆಯಿತು. ಮಂಗಳವಾರ ರಾತ್ರಿ ಒಂಬತ್ತರಿಂದ ನಸುಕಿನವರೆಗೂ ಈ ಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ಮೊದಲ ಟ್ರೆಂಡ್‌ ಆಗಿತ್ತು. ಈ ಹ್ಯಾಷ್‌ಟ್ಯಾಗ್‌ನಲ್ಲಿ ಈವರೆಗೆ 48 ಸಾವಿರಕ್ಕೂ ಹೆಚ್ಚು ಟ್ವೀಟ್‌ ಮಾಡಲಾಗಿದೆ.

ವಾರಾಣಸಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ಮನೆಯ ಗೋಡೆಯ ಮೇಲೆ,‘ನನ್ನ ಮನೆ, ರಾಹುಲ್ ಮನೆ’ ಎಂದು ಪೋಸ್ಟರ್‌ ಅಂಟಿಸುವ ಅಭಿಯಾನಕ್ಕೆ ಮಂಗಳವಾರ ರಾತ್ರಿ ಚಾಲನೆ ನೀಡಿದ್ದರು. ಆ ಅಭಿಯಾನವು ಬುಧವಾರವೂ ಮುಂದುವರಿದಿತ್ತು. ಕಾಂಗ್ರೆಸ್‌ ಕಾರ್ಯಕರ್ತರು ಪೋಸ್ಟರ್‌ ಅಂಟಿಸಿ, ಚಿತ್ರ ತೆಗೆದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ಸರ್ಕಾರಿ ಬಂಗಲೆಯನ್ನು ತೊರೆಯಲು ರಾಹುಲ್ ಅವರು ಒಪ್ಪಿಕೊಳ್ಳಬಾರದಾಗಿತ್ತು. ಆದರೆ ಅವರು ಬಂಗಲೆ ತೊರೆಯುತ್ತೇನೆ ಎಂದು ಹೇಳಿದ್ದಾರೆ. ಬಿಜೆಪಿ ಸರ್ಕಾರವು, ಅವಧಿ ಮುಗಿದಿದ್ದರೂ ತನ್ನದೇ ನಾಯಕರು ಸರ್ಕಾರಿ ಬಂಗಲೆ ತೊರೆಯದಂತೆ ನೋಡಿಕೊಂಡಿದೆ. ವಿರೋಧ ಪಕ್ಷಗಳ ನಾಯಕರನ್ನು ಮಾತ್ರ ಹೊರಗಟ್ಟುತ್ತಿದೆ’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ವಿಪ್‌ ಮಾಣಿಕಂ ಟಾಗೋರ್ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT