ಜೈಪುರ: ರಾಜಸ್ಥಾನ ರಾಜಕಾರಣದಲ್ಲಿ ಗುರುವಾರ ಕ್ಷಿಪ್ರಗತಿಯಲ್ಲಿ ಬೆಳವಣಿಗೆಗಳು ನಡೆದವು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಅವರ ನಿವಾಸದಲ್ಲಿ ಬಂಡಾಯವೆದ್ದಿದ್ದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಭೇಟಿಯಾದರು.
ಸುಮಾರು ಒಂದು ತಿಂಗಳ ಹಿಂದೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ 18 ಶಾಸಕರೊಂದಿಗೆ ಸಚಿನ್ ಪೈಲಟ್ ಬಹಿರಂಗವಾಗಿಯೇ ಬಂಡಾಯವೆದ್ದಿದ್ದರು. ಇದು ಹಲವು ಲೆಕ್ಕಾಚಾರಗಳನ್ನು ಹುಟ್ಟುಹಾಕಿತ್ತಲ್ಲದೇ, ಸರ್ಕಾರ ಉರುಳುವ ಸನ್ನಿವೇಶವೂ ಎದುರಾಗಿತ್ತು. ಹೈಕಮಾಂಡ್ ಮಧ್ಯಪ್ರವೇಶದ ನಂತರ ಇದೀಗ ಪರಿಸ್ಥಿತಿ ತಿಳಿಗೊಂಡಿದೆ. ಇದರ ಕುರುಹಾಗಿಯೇ ಪೈಲಟ್-ಗೆಹ್ಲೋಟ್ ಭೇಟಿಯನ್ನು ವಿಶ್ಲೇಷಕರು ವ್ಯಾಖ್ಯಾನಿಸುತ್ತಿದ್ದಾರೆ.
ಕಳೆದ ಮೂರು ದಿನಗಳಿಂದ ಮೌನವಾಗಿದ್ದ ಅಶೋಕ್ ಗೆಹ್ಲೋಟ್ ಗುರುವಾರ ಬೆಳಗ್ಗೆ ‘ಎಲ್ಲವನ್ನೂ ಮರೆಯುವುದು ಮತ್ತು ಕ್ಷಮಿಸಿ ಮುಂದೆ ಸಾಗಬೇಕು’ ಎಂದು ಟ್ವೀಟ್ ಮಾಡುವ ಮೂಲಕ ಮೌನ ಮುರಿದಿದ್ದಾರೆ. ಕಳೆದೊಂದು ತಿಂಗಳಿಂದ ಕಠಿಣ ಪದಗಳ ಮೂಲಕ ವಾಗ್ದಾಳಿ ನಡೆಸಿದ್ದ ಉಭಯನಾಯಕರು ಸಂಜೆ ಭೇಟಿಯಾದರು.
Jaipur: Congress leader Sachin Pilot meets CM Ashok Gehlot at his residence.
— ANI (@ANI) August 13, 2020
Congress Legislature Party meeting to take place here, ahead of the special session of the #Rajasthan Assembly tomorrow. pic.twitter.com/0Wc60ED1jc
ಜೈಸಲ್ಮೇರ್ನ ರೆಸಾರ್ಟ್ನಲ್ಲಿ ನಡೆದಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಪೈಲಟ್ ಸೇರಿದಂತೆ ಎಲ್ಲಬಂಡಾಯ ಶಾಸಕರು ಭಾಗವಹಿಸಿದ್ದಾರೆ.
ಸಚಿನ್ ಪೈಲಟ್ ಅವರು ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಳೆದ ಸೋಮವಾರ ಭೇಟಿ ಮಾಡುವುದರೊಂದಿಗೆ ಬಿಕ್ಕಟ್ಟು ಶಮನವಾಗಿದೆ. ಪಕ್ಷ ಮತ್ತು ರಾಜಸ್ಥಾನ ಸರ್ಕಾರದ ಹಿತಾಸಕ್ತಿಯ ಪರ ಕೆಲಸ ಮಾಡುವುದಾಗಿ ಪೈಲಟ್ ಮಾತು ಕೊಟ್ಟಿದ್ದಾರೆ ಹಾಗೇ ಪೈಲಟ್ ಬಣದ ಬೇಡಿಕೆಗಳನ್ನು ಹೈಕಮಾಂಡ್ ಪರಿಹರಿಸಲಿದೆ ಎಂದು ಹೇಳಲಾಗಿದೆ.
ಪೈಲಟ್ ಮತ್ತು ಅವರ ಜತೆಗಿರುವ ಶಾಸಕರ ದೂರುಗಳ ಬಗ್ಗೆ ಗಮನ ಹರಿಸುವುದಕ್ಕಾಗಿ ಮೂವರು ಸದಸ್ಯರ ಸಮಿತಿ ರಚಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ರಾಜಸ್ಥಾನದ ಉಪಮುಖ್ಯಮಂತ್ರಿಯಾಗಿದ್ದ ಪೈಲಟ್ ಅವರು ಗೆಹ್ಲೋಟ್ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಜುಲೈ 13ರಿಂದ ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಪೈಲಟ್ ಮತ್ತು ಅವರ ಜತೆಗೆ ಗುರುತಿಸಿಕೊಂಡಿದ್ದ ಇಬ್ಬರು ಸಚಿವರನ್ನು ಜುಲೈ 14ರಂದು ವಜಾ ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.