ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮೋದಿ ಸರ್ಕಾರದ ವಿರುದ್ಧ ನೀಡಿರುವ ‘ಸೀಮೆಎಣ್ಣೆ’ ಹೇಳಿಕೆಗೆ ಶಿವಸೇನಾ ನಾಯಕ ಸಂಜಯ್ ರಾವುತ್ ಬೆಂಬಲ ಸೂಚಿಸಿದ್ದಾರೆ.
‘ನಮ್ಮ ಪಕ್ಷವೂ ಇದೇ ವಿಚಾರವನ್ನು ಹಲವು ಬಾರಿ ಹೇಳಿತ್ತು. ಆದರೆ ಬೇರೆ ರೀತಿಯಲ್ಲಿ ಹೇಳಿತ್ತು ಅಷ್ಟೆ’ ಎಂದು ರಾವುತ್ ಹೇಳಿದ್ದಾರೆ.
ಲಂಡನ್ನಲ್ಲಿ ಶುಕ್ರವಾರ ಮಾತನಾಡಿದ್ದ ರಾಹುಲ್ ಗಾಂಧಿ, ‘ಬಿಜೆಪಿ ದೇಶದೆಲ್ಲೆಡೆ ಸೀಮೆಎಣ್ಣೆ ಹರಡಿದೆ. ಒಂದು ಕಿಡಿಯಷ್ಟೇ ಬೇಕಾಗಿರುವುದು, ನಾವು ದೊಡ್ಡ ಸಮಸ್ಯೆಗೆ ಸಿಲುಕಲಿದ್ದೇವೆ’ ಎಂದು ಹೇಳಿದ್ದರು.
‘ನಮ್ಮ ದೇಶದ ಜನ ಹೆದರಿದ್ದಾರೆ. ಸತ್ಯವನ್ನು ಹೇಳಲು ಸಿದ್ಧರಿಲ್ಲ. ಯಾರಾದರೂ ಕೇಂದ್ರದ ವಿರುದ್ಧ ಮಾತನಾಡಿದರೆ ಅವರ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಸರಣಿ ತನಿಖೆಗಳನ್ನು ನಡೆಸಲಾಗುತ್ತಿದೆ’ ಎಂದು ಅವರು ದೂರಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದ್ವೇಷದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶಕ್ಕೆ ಹಾನಿ ಉಂಟುಮಾಡುತ್ತಿದ್ದಾರೆ. ವಿದೇಶದಲ್ಲಿದ್ದುಕೊಂಡು ಕೆಲವು ಹೇಳಿಕೆಗಳನ್ನು ನೀಡುವ ಮೂಲಕ ಅವರು ದೇಶಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು.