64 ಅನಗತ್ಯ ಪಿಐಎಲ್:ಎನ್ಜಿಒ ಅಧ್ಯಕ್ಷರೊಬ್ಬರಿಗೆ ನ್ಯಾಯಾಂಗ ನಿಂದನೆ ನೋಟಿಸ್

ನವದೆಹಲಿ: ನ್ಯಾಯಾಲಯದ ಅಮೂಲ್ಯ ಸಮಯ ಹಾಳು ಮಾಡುವುದರ ಮೂಲಕ ನ್ಯಾಯಾಂಗವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದಿರುವ ಸುಪ್ರೀಂ ಕೋರ್ಟ್ ಎನ್ಜಿಒ ಒಂದರ ಅಧ್ಯಕ್ಷರೊಬ್ಬರಿಗೆ ನ್ಯಾಯಾಂಗ ನಿಂದನೆಯ ನೋಟಿಸ್ ಜಾರಿಗೊಳಿಸಿದೆ.
ಎನ್ಜಿಒ ಸೂರಜ್ ಇಂಡಿಯಾ ಟ್ರಸ್ಟ್ ಅಧ್ಯಕ್ಷ ರಾಜೀವ್ ದಯಾ ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದ್ದು, ‘ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು’ ಎಂದು ಕೇಳಿದೆ.
ಅನಗತ್ಯವಾದಂತಹ 64 ಪಿಐಎಲ್ಗಳನ್ನು ಸಲ್ಲಿಸುವ ಮೂಲಕ ಪದೇ ಪದೇ ನ್ಯಾಯಾಲಯದ ಸಮಯ ಹಾಳು ಮಾಡಿದ್ದು ಮತ್ತು ನ್ಯಾಯಾಲಯವು ಅಪವಾದಕ್ಕೆ ಒಳಗಾಗುವಂತೆ ಮಾಡಿದ್ದಕ್ಕಾಗಿ ಎನ್ಜಿಒ ಅಧ್ಯಕ್ಷರಿಗೆ ಭಾರಿ ದಂಡ ವಿಧಿಸಿ ಸುಪ್ರೀಂ ಕೋರ್ಟ್ 2017ರ ಮೇ 1 ರಂದು ಆದೇಶಿಸಿತ್ತು.
ಈ ಸಂಬಂಧ ₹25 ಲಕ್ಷ ವೆಚ್ಚವನ್ನು ಠೇವಣಿಯಿಡದ ಕಾರಣಕ್ಕೆ ಸುಪ್ರೀಂ ಕೋರ್ಟ್ ಕಳೆದ ಫೆಬ್ರುವರಿಯಲ್ಲಿ ರಾಜೀವ್ ದಯಾ ಅವರ ವಿರುದ್ದ ವಾರಂಟ್ ಕೂಡ ಜಾರಿಗೊಳಿಸಿತ್ತು.
ಈ ಕುರಿತು ನ್ಯಾಯಮೂರ್ತಿ ಎಸ್.ಕೆ.ಕೌಲ್ ನೇತೃತ್ವದ ಪೀಠವು ಜುಲೈ 9ರಂದ ಹೊರಡಿಸಿದ ಆದೇಶದಲ್ಲಿ, ದಯಾ ಅವರು ಮನವಿಗಳನ್ನು ಸಲ್ಲಿಸುವ ಮೂಲಕ ಹಾಗೂ ಪತ್ರಗಳನ್ನು ಬರೆಯುವ ಮೂಲಕ ಅನಗತ್ಯವಾಗಿ ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ ನ್ಯಾಯಾಂಗ ನಿಂದನೆಯ ಕುರಿತು ನೋಟಿಸ್ ಜಾರಿಗೆ ಸೂಚಿಸಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.