ನವದೆಹಲಿ: ದೇಶದಲ್ಲಿರುವ ನಕಲಿ ಬಾಬಾಗಳು ಹಾಗೂ ಆಶ್ರಮಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ದುಂಪಾಲ ರಾಮರೆಡ್ಡಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ವಜಾಗೊಳಿಸಿದೆ.
‘ನ್ಯಾಯಾಲಯವು ವ್ಯಕ್ತಿಯೊಬ್ಬರನ್ನು ನಕಲಿ ಬಾಬಾ ಎಂದು ನಿರ್ಧರಿಸಲುಹೇಗೆ ಸಾಧ್ಯ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ತ್ರಿಸದಸ್ಯ ಪೀಠವು, ಅರ್ಜಿದಾರರ ಪರ ವಕೀಲೆ ಮೇನಕಾ ಗುರುಸ್ವಾಮಿ ಅವರಿಗೆ ತಿಳಿಸಿತು.
‘ಅರ್ಜಿದಾರರ ಪರ ವಕೀಲರು ಅರ್ಜಿಯನ್ನು ಹಿಂಪಡೆಯಲು ಅನುಮತಿ ಕೋರಿದ್ದಾರೆ. ಅವರಿಗೆ ಅನುಮತಿ ಕೊಡಲಾಗಿದೆ. ಈ ರಿಟ್ ಅರ್ಜಿಯನ್ನು ವಜಾಗೊಳಿಸಲಾಗಿದೆ’ ಎಂದು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ.ಬಾಲಸುಬ್ರಮಣಿಯನ್ ಅವರಿದ್ದ ಪೀಠವು ಹೇಳಿತು.
‘ಅಖಿಲ ಭಾರತೀಯ ಅಕಹರಾ ಪರಿಷತ್, ನಕಲಿ ಬಾಬಾಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಇದರ ಆಧಾರದಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಮೇನಕಾ ಅವರು ಪೀಠಕ್ಕೆ ಮನವಿ ಮಾಡಿದರು.
‘ಪರಿಷತ್ ತಯಾರಿಸಿರುವ ಈ ಪಟ್ಟಿಯನ್ನು ನಾವು ಹೇಗೆ ನಂಬಬೇಕು. ನಕಲಿ ಬಾಬಾಗಳನ್ನು ಮಾತನಾಡಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆಯೇ ಎಂಬುದೂ ನಮಗೆ ಗೊತ್ತಿಲ್ಲ. ಬಾಬಾಗಳ ಬಗ್ಗೆ ಅಕಹರಾ ಪರಿಷತ್ ಹೊಂದಿರುವ ಅಭಿಪ್ರಾಯವಾದರೂ ಏನು ಎಂಬುದೂ ನಮಗೆ ತಿಳಿದಿಲ್ಲ. ಇದರಲ್ಲಿ ನಾವು ಮಧ್ಯಪ್ರವೇಶಿಸಲು ಆಗುವುದಿಲ್ಲ’ ಎಂದು ನ್ಯಾಯಪೀಠ ತಿಳಿಸಿತು.