ನವದೆಹಲಿ: ವೈದ್ಯರು ಹಾಗೂ ಆರೋಗ್ಯ ಸೇವೆಗಳನ್ನು ಗ್ರಾಹಕರ ಸಂರಕ್ಷಣಾ ಕಾಯ್ದೆ, 2019ರ ಅಡಿ ತರಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
2021ರಲ್ಲಿ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ, ಮೆಡಿಕೋಸ್ ಲೀಗಲ್ ಆ್ಯಕ್ಷನ್ ಗ್ರೂಪ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಪೀಠ ಈ ತೀರ್ಪನ್ನು ನೀಡಿದೆ.
ಅರ್ಜಿದಾರರ ಪರ ವಾದಿಸಿದ ವಕೀಲ ಸಿದ್ಧಾರ್ಥ್ ಲುತ್ರಾ, ‘1986ರ ಕಾಯ್ದೆಯಲ್ಲಿ ಆರೋಗ್ಯ ಕಾಳಜಿಯನ್ನು ಸೇವೆ ಎಂದು ನಮೂದಿಸಲಾಗಿಲ್ಲ. ಹೊಸ ಕಾಯ್ದೆಯಲ್ಲಿ ಇದನ್ನು ಸೇರಿಸುವ ಪ್ರಸ್ತಾಪವಿದ್ದರೂ ಸರ್ಕಾರ ಅಂತಿಮ ಕ್ಷಣದಲ್ಲಿ ಸೇರಿಸುವುದನ್ನು ತಡೆದಿತ್ತು’ ಎಂದು ಹೇಳಿದರು.
‘ಸೇವೆಯ ಅರ್ಥ ಕಾನೂನಿನಡಿಯಲ್ಲಿ ವಿಶಾಲವಾಗಿದೆ. ಒಂದು ವೇಳೆ ಸಂಸತ್ತು ಆರೋಗ್ಯ ಕಾಳಜಿಯನ್ನು ಕಾಯ್ದೆಯಿಂದ ಹೊರಗಿಡಲು ಬಯಸಿದರೆ, ಅವರು ಅದನ್ನು ನೇರವಾಗಿ ಹೇಳುತ್ತಿದ್ದರು’ ಎಂದು ಕೋರ್ಟ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಈ ಮೂಲಕ ಬಾಂಬೆ ಹೈಕೋರ್ಟ್ ನೀಡಿದ ತೀರ್ಪನ್ನು ಎತ್ತಿಹಿಡಿದಿದೆ.