ನವದೆಹಲಿ: ಹಣ ಅಕ್ರಮ ವರ್ಗಾವಣೆ ಮತ್ತು ಹಲವರಿಗೆ ವಂಚಿಸಿದ ಆರೋಪದ ಮೇಲೆ ತಿಹಾರ್ ಜೈಲಿನಲ್ಲಿರುವ ವಂಚಕ ಸುಕೇಶ್ ಚಂದ್ರಶೇಖರ್ ಮತ್ತು ಆತನ ಪತ್ನಿ, ಜೀವ ಬೆದರಿಕೆ ಇರುವುದರಿಂದ ದೆಹಲಿಯ ಹೊರಗಿನ ಜೈಲಿಗೆ ವರ್ಗಾಯಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.
ಚಂದ್ರಶೇಖರ್ ಮತ್ತು ಅವರ ಪತ್ನಿ ಲೀನಾ ಪೌಲೋಸ್ ಅವರನ್ನು ಸ್ಥಳಾಂತರಿಸಬಹುದಾದ ಇತರೆ ಜೈಲುಗಳ ಹೆಸರನ್ನು ನ್ಯಾಯಮೂರ್ತಿಗಳಾದ ಸಿ. ಟಿ. ರವಿಕುಮಾರ್ ಮತ್ತು ಸುಧಾಂಶು ಧುಲಿಯಾ ಅವರ ರಜಾಕಾಲದ ಪೀಠಕ್ಕೆ ಕೇಂದ್ರ ತಿಳಿಸುವ ನಿರೀಕ್ಷೆಯಿದೆ.
ಪತ್ನಿ ಲೀನಾ ಜೊತೆ ಆರಾಮವಾಗಿರಲು ತಿಹಾರ್ ಜೈಲು ಅಧಿಕಾರಿಗಳಿಗೆ ಪ್ರತಿ ಹದಿನೈದು ದಿನಕ್ಕೆ ₹60 ರಿಂದ ₹ 75 ಲಕ್ಷ ಲಂಚ ನೀಡಿದ ಆರೋಪ ಚಂದ್ರಶೇಖರ್ ಮೇಲಿದೆ.
ದಂಪತಿ ಪರ ವಾದ ಮಂಡಿಸಿದ ಹಿರಿಯ ವಕೀಲೆ ಮೀನಾಕ್ಷಿ ಅರೋರಾ, ಹಲವು ಜೈಲು ಅಧಿಕಾರಿಗಳು ಹಣ ಪಡೆದು ಬಂಧನಕ್ಕೆ ಒಳಗಾಗಿದ್ದಾರೆ. ಇತರೆ ಅಧಿಕಾರಿಗಳಿಂದ ಬೆದರಿಕೆ ಇರುವುದರಿಂದ ನ್ಯಾಯಾಲಯದ ಇಚ್ಛೆಯಂತೆ ಯಾವುದೇ ಜೈಲಿಗೆ ಸ್ಥಳಾಂತರಿಸುವಂತೆ ಮನವಿ ಮಾಡಿದರು.
ಎಐಎಡಿಎಂಕೆ ಮಾಜಿ ನಾಯಕ ಟಿಟಿವಿ ದಿನಕರನ್ ಮತ್ತು ಇತರರು ಒಳಗೊಂಡಿರುವ 2017 ರ ಚುನಾವಣಾ ಆಯೋಗದ ಲಂಚ ಪ್ರಕರಣ ಹಾಗೂ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಏಪ್ರಿಲ್ 4 ರಂದು ಬಂಧಿಸಿತ್ತು.