ಲಖನೌ: ಮುಲಾಯಂ ಸಿಂಗ್ ಯಾದವ್ ಅವರ ತಮ್ಮ ಶಿವಪಾಲ್ ಸಿಂಗ್ ಯಾದವ್ ಅವರು ಅಣ್ಣನ ಮಗ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಸಮಾಜವಾದಿ ಪಕ್ಷದ ಯಾದವೀ ಕಲಹ ಬಹಿರಂಗಗೊಂಡಿದೆ.
ಟ್ವಿಟರ್ನಲ್ಲಿ ತಮ್ಮ ಮನದಾಳ ಹಂಚಿಕೊಂಡಿರುವ ಶಿವಪಾಲ್, ಅಖಿಲೇಶ್ ಅವರ ಹೆಸರು ಹೇಳದೇ ಟೀಕಿಸಿದ್ದಾರೆ. ‘ನಾನು ಆತನನ್ನು ತೃಪ್ತಿಪಡಿಸಲು ಆತ್ಮಗೌರವ ಬದಿಗಿಟ್ಟು ಅತ್ಯಂತ ಕೆಳಮಟ್ಟಕ್ಕೆ ಇಳಿದೆ. ನಾನು ಇನ್ನೂ ಆತನ ಮೇಲೆ ಕೋಪಗೊಂಡಿದ್ದೇನೆ ಅಂದಮೇಲೆ, ನನ್ನನ್ನು ಆತ ಎಷ್ಟು ನೋಯಿಸಿದ್ದಾನೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು. ನಾನು ಆತನಿಗೆ ನಡೆಯಲು ಕಲಿಸಿದ್ದೆ, ಆದರೆ ಆತ ನನ್ನನ್ನು ತುಳಿಯುತ್ತಿದ್ದಾನೆ. ಮರುಸಂಘಟನೆಯ ವಿಶ್ವಾಸದೊಂದಿಗೆ, ಎಲ್ಲರ ಸಹಕಾರಕ್ಕಾಗಿ ಆಶಿಸುತ್ತಾ ಈದ್ ಮುಬಾರಕ್’ ಎಂದು ಶಿವಪಾಲ್ ಯಾದವ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಶಿವಪಾಲ್ ಯಾದವ್ ಅವರು ಟೀಕೆಗೆ ಟ್ವೀಟರ್ ಅನ್ನು ಬಳಸಿಕೊಂಡಿದ್ದು ಇದೇ ಮೊದಲು. ಹೀಗಾಗಿ ಈ ಟ್ವೀಟ್ ಸಮಾಜವಾದಿ ಪಕ್ಷದಲ್ಲಿ ಆಘಾತ ಉಂಟು ಮಾಡಿದೆ.
अपने सम्मान के न्यूनतम बिंदु पर जाकर मैंने उसे संतुष्ट करने का प्रयास किया!
— Shivpal Singh Yadav (@shivpalsinghyad) May 3, 2022
इसके बावजूद भी अगर नाराज हूं तो किस स्तर तक उसने हृदय को चोट दी होगी!
हमने उसे चलना सिखाया..
और वो हमें रौंदते चला गया..
एक बार पुनः पुनर्गठन,आत्मविश्वास व सबके सहयोग की अप्रतिम शक्ति से ईद की मुबारकबाद।
‘ಪಕ್ಷ ಈಗ ವಿಭಜನೆಯತ್ತ ಸಾಗುತ್ತಿದೆ. ನಮ್ಮ ಮುಸ್ಲಿಂ ಮುಖಂಡರು ಈಗಾಗಲೇ ಅಖಿಲೇಶ್ ಅವರ ನಾಯಕತ್ವದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಈಗ ಶಿವಪಾಲ್ ತಮ್ಮ ಮನದಾಳವನ್ನು ಸ್ಪಷ್ಟಪಡಿಸಿದ್ದಾರೆ. ಪಕ್ಷಕ್ಕೆ ಕೆಟ್ಟ ದಿನಗಳು ಕಾದಿವೆ‘ ಎಂದು ಎಸ್ಪಿಯ ಹಿರಿಯ ಶಾಸಕರೊಬ್ಬರು ಹೇಳಿದರು.
ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗಾಗಿ ಒಂದಾಗಿದ್ದ ಶಿವಪಾಲ್ ಯಾದವ್ ತಮ್ಮ ಮತ್ತು ಅಖಿಲೇಶ್ ಯಾದವ್ ನಡುವೆ ಸದ್ಯ ಮನಸ್ತಾಪ ಮನೆ ಮಾಡಿದೆ. ಈ ಮಧ್ಯೆ ಶಿವಪಾಲ್ ಯಾದವ್ ಅವರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಶಿವಪಾಲ್ ಯಾದವ್ ತಮ್ಮನ್ನು ಉಚ್ಚಾಟಿಸಿ ನೋಡುವಂತೆ ಅಖಿಲೇಶ್ಗೆ ಇತ್ತೀಚೆಗೆ ಸವಾಲೆಸೆದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.