ಲಖನೌ: ಉತ್ತರ ಪ್ರದೇಶದಲ್ಲಿ ಮಂಗಳವಾರ ಸುರಿದ ಮಳೆಗೆ 18 ಜಿಲ್ಲೆಗಳ ಸುಮಾರು 1,300 ಗ್ರಾಮಗಳು ಜಲಾವೃತಗೊಂಡಿವೆ. ಮಳೆ ಸಂಬಂಧಿತ ಅವಘಡಗಳಿಗೆ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ನಾಲ್ವರು ಭಾರಿ ಮಳೆಯಿಂದಾಗಿ, ಓರ್ವ ಸಿಡಿಲು ಬಡಿದು, ಮತ್ತೊರ್ವ ಹಾವು ಕಡಿತದಿಂದ ಮೃತಪಟ್ಟಿದ್ದಾರೆ ಎಂದು ವಿಪತ್ತು ನಿಗ್ರಹ ಕಮಿಷನರ್ ಕಚೇರಿ ತಿಳಿಸಿದೆ.
ಬಲರಾಮ್ಪುರದಲ್ಲಿ 287, ಸಿದ್ಧರತ್ನಗರ್ನಲ್ಲಿ 129, ಗೋರಖಪುರದಲ್ಲಿ 120, ಶ್ರವಸ್ತಿಯಲ್ಲಿ 114, ಲಖಿಂಪುರ ಖೇರಿಯಲ್ಲಿ 86 ಮತ್ತು ಬಾರಾಬಂಕಿಯಲ್ಲಿ 82 ಗ್ರಾಮಗಳು ಮಳೆಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿವೆ ಎಂದು ಮಾಹಿತಿ ನೀಡಿದೆ.
ಸಿಎಂ ಯೋಗಿ ಆದಿತ್ಯನಾಥ್ ಅವರು ಮೃತ ವ್ಯಕ್ತಿಗಳ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಶೀಘ್ರದಲ್ಲೇ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಹೇಳಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ಪಿಎಸಿಯನ್ನು ತುರ್ತಾಗಿ ಕಾರ್ಯಾಚರಣೆಗೆ ಇಳಿಯಲು ನಿರ್ದೇಶಿಸಿದ್ದಾರೆ.
ನಿರಂತರ ಮಳೆಯಿಂದಾಗಿ ಬದೌನ್ ಪ್ರದೇಶದಲ್ಲಿ ಗಂಗಾ ನದಿ, ಲಖಿಂಪುರ ಖೇರಿಯಲ್ಲಿ ಶಾರದ ನದಿ, ಬಾರಾಬಂಕಿಯಲ್ಲಿ ಗಾಗರಾ ನದಿ ಸೇರಿದಂತೆ ಹಲವು ಪ್ರಮುಖ ನದಿಗಳು ಅಪಾಯದ ಅಂಚಿನಲ್ಲಿ ಹರಿಯುತ್ತಿವೆ.