ಕೋಲ್ಕತ್ತ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೇಲೆ ರಾಜಕೀಯ ಸೇರುವ ಒತ್ತಡ ಹೇರಲಾಗಿತ್ತು ಎಂದು ಮಾಜಿ ಸಚಿವ ಹಾಗೂ ಸಿಪಿಐ(ಎಂ) ಹಿರಿಯ ಮುಖಂಡ ಅಶೋಕ್ ಭಟ್ಟಾಚಾರ್ಯ ಹೇಳಿಕೆಯು ಪಶ್ಚಿಮ ಬಂಗಾಳದಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿಸಿದೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಶನಿವಾರದಂದು ಲಘು ಹೃದಯಾಘಾತಕ್ಕೊಳಗಾಗಿದ್ದರು. ಕೋಲ್ಕತ್ತದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆ್ಯಂಜಿಯೊಪ್ಲಾಸ್ಟಿಗೆ ಒಳಗಾಗಿದ್ದರು.
ದಾದಾ ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಾಗಳು ಹಬ್ಬಿದ್ದವು. ಆದರೆ ರಾಜಕೀಯ ಪ್ರವೇಶ ಬಗ್ಗೆ ಗಂಗೂಲಿ ಎಲ್ಲೂ ಪ್ರತಿಕ್ರಿಯಿಸಿಲ್ಲ.
ಕೆಲವರು ಗಂಗೂಲಿ ಅವರನ್ನು ರಾಜಕೀಯವಾಗಿ ಬಳಸಬೇಕೆಂದು ಬಯಸಿದ್ದರು. ಅದು ಅವರ ಮೇಲೆ ಒತ್ತಡ ಹೇರಿದೆ. ಅವರು ರಾಜಕೀಯ ಅಂಶವಲ್ಲ. ಸೌರವ್ ಗಂಗೂಲಿ ಕ್ರೀಡಾ ಐಕಾನ್ ಆಗಿಯೇ ಗುರುತಿಸಬೇಕು ಎಂದು ಸೌರವ್ ಗಂಗೂಲಿ ಕುಟುಂಬದ ಸ್ನೇಹಿತರೂ ಆಗಿರುವ ಅಶೋಕ್ ಭಟ್ಟಾಚಾರ್ಯ ಹೇಳಿದರು.
ರಾಜಕೀಯಕ್ಕೆ ಸೇರಲು ನಾವು ಅವರ ಮೇಲೆ ಒತ್ತಡವನ್ನು ಹೇರಬಾರದು. ಕಳೆದ ವಾರ ಸೌರವ್ ಗಂಗೂಲಿ ಅವರಲ್ಲಿ ನಾನು ರಾಜಕೀಯಕ್ಕೆ ಸೇರಬಾರದು ಎಂದು ಹೇಳಿದ್ದೆ. ಅವರದನ್ನು ವಿರೋಧಿಸಲಿಲ್ಲ ಎಂದು ದಾದಾ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಬಳಿಕ ಭಟ್ಟಾಚಾರ್ಯ ತಿಳಿಸಿದರು.
ಮಾಜಿ ಸಚಿವರ ಅಭಿಪ್ರಾಯಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್,ಕೆಲವರು ಕೆಟ್ಟ ಮನಸ್ಥಿತಿಯಿಂದಾಗಿ ಎಲ್ಲದರಲ್ಲೂ ರಾಜಕೀಯವನ್ನು ಹುಡುಕುತ್ತಾರೆ. ಲಕ್ಷಾಂತರ ಅಭಿಮಾನಿಗಳಂತೆಯೇ ಸೌರವ್ ಗಂಗೂಲಿ ಬೇಗನೇ ಚೇತರಿಸಿಕೊಳ್ಳಲಿ ಎಂಬುದನ್ನು ನಾವು ಬಯಸುತ್ತಿದ್ದೇವೆ ಎಂದು ಹೇಳಿದರು.
ತೃಣಮೂಲ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಸಚಿವ ಶೋಭನ್ದೇಬ್ ಚಟರ್ಜಿ ಸಹ ಗಂಗೂಲಿ ಅವರನ್ನು ಆಸ್ಪತ್ರೆಯಲ್ಲಿ ಸಂದರ್ಶನ ಮಾಡಿದ ಬಳಿಕ ದಾದಾ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸುವ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.