ಹೋಟೆಲ್ ನಿರ್ಮಾಣ ವಿವಾದ: ಬಾಂಬೆ ಹೈಕೋರ್ಟ್ ಮೊರೆ ಹೋದ ನಟ ಸೋನು ಸೂದ್

ಮುಂಬೈ: ಜುಹು ಪ್ರದೇಶದಲ್ಲಿ ವಸತಿ ಕಟ್ಟಡವೊಂದನ್ನು ಅನುಮತಿ ಪಡೆಯದೆ ಹೋಟೆಲ್ ಆಗಿ ಪರಿವರ್ತಿಸಿದ ಆರೋಪದಡಿ ಬೃಹತ್ ಮುಂಬೈ ಮಹಾನಗರ ಪಾಲಿಕೆಯು(ಬಿಎಂಸಿ) ನೀಡಿದ್ದ ನೋಟಿಸ್ ಅನ್ನು ಪ್ರಶ್ನಿಸಿ ಬಾಲಿವುಡ್ ನಟ ಸೋನು ಸೂದ್ ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕಳೆದ ವಾರ ವಕೀಲ ಡಿ.ಪಿ ಸಿಂಗ್ ಅವರ ಮೂಲಕ ಸೋನು ಸೂದ್ ಅವರು ಈ ಸಂಬಂಧ ಅರ್ಜಿ ಸಲ್ಲಿಸಿದ್ದರು.
‘ಆರು ಅಂತಸ್ತಿನ ಶಕ್ತಿ ಸಾಗರ್ ಕಟ್ಟಡದಲ್ಲಿ ತಾವು ಯಾವುದೇ ‘ಅಕ್ರಮ ಅಥವಾ ಅನಧಿಕೃತ’ ನಿರ್ಮಾಣವನ್ನು ನಡೆಸಿಲ್ಲ’ ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ.
ನ್ಯಾಯಮೂರ್ತಿ ಪೃಥ್ವಿರಾಜ್ ಚವಾಣ್ ಅವರು ಸೋಮವಾರ ಅರ್ಜಿ ವಿಚಾರಣೆಯನ್ನು ನಡೆಸಲಿದ್ದಾರೆ.
‘ಅರ್ಜಿದಾರ ಸೋನು ಸೂದ್ ಅವರು ಕಟ್ಟಡದಲ್ಲಿ ಯಾವುದೇ ಅಕ್ರಮ ಬದಲಾವಣೆಗಳನ್ನು ಮಾಡಿಲ್ಲ. ಮಹಾರಾಷ್ಟ್ರ ಪ್ರಾದೇಶಿಕ ಮತ್ತು ಪಟ್ಟಣ ಯೋಜನೆ (ಎಂಆರ್ಟಿಪಿ)ಕಾಯ್ದೆಯಡಿ ಅವಕಾಶವಿರುವ ಬದಲಾವಣೆಗಳನ್ನು ಮಾತ್ರ ಮಾಡಲಾಗಿದೆ’ ಎಂದು ಡಿ.ಪಿ ಸಿಂಗ್ ಅವರು ತಿಳಿಸಿದರು.
ಕಳೆದ ವರ್ಷ ಅಕ್ಟೋಬರ್ನಲ್ಲಿ ಬಿಎಂಸಿ ನೀಡಿರುವ ನೋಟಿಸ್ ಅನ್ನು ನ್ಯಾಯಾಲಯ ರದ್ದುಪಡಿಸಬೇಕು ಮತ್ತು ಸೋನು ಸೂದ್ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳಬಾರದೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಈ ಸಂಬಂಧ ಸೋನ್ ಸೂದ್ ಸಿವಿಲ್ ಕೋರ್ಟ್ ಮೊರೆ ಹೋಗಿದ್ದರು. ಆದರೆ ಅವರಿಗೆ ಯಾವುದೇ ಪರಿಹಾರ ಸಿಕ್ಕಿರಲಿಲ್ಲ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.