ನವದೆಹಲಿ: ಬೆಳೆ ತ್ಯಾಜ್ಯ ಸುಡುವ ಪ್ರವೃತ್ತಿ ತಡೆಯಲು ನೆರೆ ರಾಜ್ಯಗಳು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲು ನಿವೃತ್ತ ನ್ಯಾಯಮೂರ್ತಿ ಮದನ್ ಬಿ ಲೋಕೂರೆ ನೇತೃತ್ವದಲ್ಲಿ ಏಕಸದಸ್ಯ ಸಮಿತಿ ರಚಿಸುವ ತನ್ನ ಅ.16ರ ಆದೇಶವನ್ನು ಸುಪ್ರಿಂ ಕೋರ್ಟ್ ಸೋಮವಾರ ತಡೆ ಹಿಡಿಯಿತು.
ದೆಹಲಿ–ರಾಷ್ಟ್ರ ರಾಜಧಾನಿ ವಲಯದಲ್ಲಿ(ಎನ್ಸಿಆರ್) ವಾಯು ಮಾಲಿನ್ಯಕ್ಕೆನೆರೆ ರಾಜ್ಯಗಳಲ್ಲಿನ ಕೃಷಿ ತ್ಯಾಜ್ಯ ಸುಡುವ ಪ್ರವೃತ್ತಿಯು ಪ್ರಮುಖ ಕಾರಣವಾಗಿದೆ. ಸುಡುವುದನ್ನು ತಡೆಯಲು ಆಯಾ ರಾಜ್ಯಗಳು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲು ಸಮಿತಿ ರಚಿಸಲಾಗಿತ್ತು.
ತ್ಯಾಜ್ಯ ಸುಡುವಿಕೆ ತಡೆಯುವುದು ಸೇರಿದಂತೆ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಮಗ್ರ ಶಾಸನ ರೂಪಿಸುವ ಚಿಂತನೆ ನಡೆದಿದೆ ಎಂಬ ಕೇಂದ್ರದ ನಿಲುವು ಒಪ್ಪಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ಪೀಠ ಈ ನಿರ್ಧಾರವನ್ನು ಪ್ರಕಟಿಸಿತು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಕೇಂದ್ರ ಸರ್ಕಾರ ಈ ಸಮಸ್ಯೆಯನ್ನು ಸಮಗ್ರವಾಗಿ ಪರಿಶೀಲಿಸಿದೆ. ಉದ್ದೇಶಿತ ಕಾಯ್ದೆಗೆ ಸಂಬಂಧಿಸಿದ ಕರಡು ಮಸೂದೆಯನ್ನು ನಾಲ್ಕು ದಿನಗಳಲ್ಲಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.