ನವದೆಹಲಿ: ಹಸುವಿನ ಸಗಣಿ ಮತ್ತು ಗಂಜಲದ ಕುರಿತು ಫೇಸ್ಬುಕ್ನಲ್ಲಿ ಹೇಳಿಕೆ ಪ್ರಕಟಿಸಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನಕ್ಕೆ ಒಳಗಾಗಿದ್ದ ಹೋರಾಟಗಾರನಿಗೆ ಪರಿಹಾರ ನೀಡಬೇಕೆಂದು ಕೋರಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮಣಿಪುರ ಸರ್ಕಾರಕ್ಕೆ ಸೂಚಿಸಿದೆ.
ಸಂತ್ರಸ್ತನಿಗೆ ಪರಿಹಾರ ನೀಡುವಂತೆ ಅರ್ಜಿದಾರರು ಮನವಿ ಸಲ್ಲಿಸಿದ್ದರಿಂದ ಉನ್ನತ ನ್ಯಾಯಾಲಯವು ಮಣಿಪುರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು. ಎರಡು ವಾರಗಳಲ್ಲಿ ರಾಜ್ಯ ಸರ್ಕಾರ ಪ್ರತಿಕ್ರಿಯೆ ನೀಡಬೇಕು ಎಂದು ನಿರ್ದೇಶನ ನೀಡಿದ ನ್ಯಾಯಾಲಯವು, ಆಗಸ್ಟ್ 6 ರಂದು ಅರ್ಜಿಯ ಅಂತಿಮ ವಿಲೇವಾರಿ ಮಾಡುವುದಾಗಿ ಪ್ರಕಟಿಸಿತು.
‘ಇದು ಗಂಭೀರ ವಿಷಯ. ಇದರಲ್ಲಿ ಒಬ್ಬರು ತಮ್ಮ ಸ್ವಾತಂತ್ರ್ಯ ಕಳೆದುಕೊಂಡಿದ್ದಾರೆ’ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ಹೇಳಿತು.
ಹೋರಾಟಗಾರ ಎರೆಂಡ್ರೊ ಲೈಚೋಂಬಮ್ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಸೋಮವಾರ ನೀಡಿದ ಆದೇಶವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಲ್ಲಿಸಿದ ನಂತರ, ಬಂಧನದ ಆದೇಶ ರದ್ದುಪಡಿಸಲಾಗಿದೆ. ಹೋರಾಟಗಾರನ ತಂದೆ ಎಲ್. ರಘುಮಣಿ ಸಿಂಗ್ ಪರವಾಗಿ ವಕೀಲ ಎಸ್. ಫರಸತ್ ಹಾಜರಾಗಿದ್ದರು.