ನವದೆಹಲಿ: ಲೈಂಗಿಕ ದೌರ್ಜನ್ಯ ಮತ್ತು ಪೊಲೀಸರ ಅಸಡ್ಡೆಗೆ ಒಳಗಾಗಿದ್ದ ಮಹಿಳೆ ಹಾಗೂ ಆಕೆಯ ಸ್ನೇಹಿತ ಸುಪ್ರೀಂಕೋರ್ಟ್ ಮುಂಭಾಗದಲ್ಲಿ ಬೆಂಕಿ ಹಚ್ಚಿಕೊಂಡಿದ್ದ ಘಟನೆಗೆ ಸಂಬಂಧಿಸಿ ನಾಲ್ಕು ವಾರಗಳೊಳಗೆ ವರದಿ ಸಲ್ಲಿಸುವಂತೆ ದೆಹಲಿ ಹಾಗೂ ಉತ್ತರ ಪ್ರದೇಶ ಪೊಲೀಸರಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ) ಸೂಚಿಸಿದೆ.
‘ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯಲ್ಲಿ, ವ್ಯವಸ್ಥೆಯಿಂದಲೂ ತಾನು ಸಂತ್ರಸ್ತಳಾದೆ ಎಂಬ ಭಾವನೆ ಮೂಡುವಂತಾಗಿದ್ದು ಆಘಾತಕಾರಿ’ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಬಿಎಸ್ಪಿ ಸಂಸದ ಅತುಲ್ ರಾಯ್ ತನ್ನ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು 24 ವರ್ಷದ ಮಹಿಳೆ ಆರೋಪಿಸಿದ್ದರು. ಈ ಬಗ್ಗೆ ದೂರು ನೀಡಿದ ನಂತರ ಉತ್ತರ ಪ್ರದೇಶ ಪೊಲೀಸರು ತನಗೆ ಕಿರುಕುಳ ನೀಡುತ್ತಿದ್ದರು ಎಂದೂ ಮಹಿಳೆ ಆರೋಪಿಸಿದ್ದರು.
ಈ ಕಿರುಕುಳ ತಾಳಲಾಗದೇ ಆ ಮಹಿಳೆ ಹಾಗೂ ಆಕೆಯ ಸ್ನೇಹಿತ ಸತ್ಯಂ ರಾಯ್ ಅವರು ಆಗಸ್ಟ್ 16ರಂದು ಸುಪ್ರೀಂಕೋರ್ಟ್ನ ಗೇಟ್ ಮುಂದೆ ಬೆಂಕಿ ಹಚ್ಚಿಕೊಂಡಿದ್ದರು. ನಂತರ ಇಬ್ಬರೂ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟರು.
ಈ ಪ್ರಕರಣ ಕುರಿತು ವರದಿ ನೀಡುವಂತೆ ಉತ್ತರ ಪ್ರದೇಶ ಡಿಜಿಪಿ ಹಾಗೂ ದೆಹಲಿ ಪೊಲೀಸ್ ಕಮಿಷನರ್ ಅವರಿಗೆ ನೋಟಿಸ್ ನೀಡಲಾಗಿದೆ. ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆಯೂ ತಿಳಿಸುವಂತೆ ಸೂಚಿಸಲಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.
ಸಂತ್ರಸ್ತರ ಕುಟುಂಬಗಳ ಸದಸ್ಯರ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಡಿಜಿಪಿ ಅವರಿಗೆ ಆಯೋಗ ಸೂಚಿಸಿದೆ.
‘ಬೆಂಕಿ ಹಚ್ಚಿಕೊಳ್ಳುವ ಮುನ್ನ ಮಹಿಳೆ ಮತ್ತು ಆಕೆಯ ಸ್ನೇಹಿತ ಫೇಸ್ಬುಕ್ ಲೈವ್ ಮೂಲಕ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಅತ್ಯಾಚಾರಕ್ಕೆ ಸಂಬಂಧಿಸಿ 2019ರ ಜೂನ್ನಲ್ಲಿ ಸಂಸದ ರಾಯ್ ವಿರುದ್ಧ ದೂರು ದಾಖಲಿಸಿದ್ದೆ, ಆದರೆ, ಪೊಲೀಸರು ಸಂಸದನ ನೆರವಿಗೆ ನಿಂತರು ಎಂದು ಆಕೆ ಹೇಳಿದ್ದರು’ ಎಂಬುದಾಗಿ ಆಯೋಗ ತಿಳಿಸಿದೆ.
‘ಆಕೆ ವಿರುದ್ಧ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿ, ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದರು’ ಎಂದು ವರದಿಗಳನ್ನು ಉಲ್ಲೇಖಿಸಿ ಆಯೋಗ ತಿಳಿಸಿದೆ.
ಸಂತ್ತಸ್ತೆ ಹಾಗೂ ಆಕೆಯ ಸ್ನೇಹಿತ ಆತ್ಮಹತ್ಯೆ ಮಾಡಿಕೊಳ್ಳಲು ಕುಮ್ಮಕ್ಕು ನೀಡಿದ ಆರೋಪದ ಮೇಲೆ, ಸಂಸದ ರಾಯ್ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಕಳೆದ ತಿಂಗಳು ಪ್ರಕರಣ ದಾಖಲಿಸಿದ್ದಾರೆ.
ಸಂಸದ ರಾಯ್ ಅವರನ್ನು ಸದ್ಯ ನೈನಿ ಜೈಲಿನಲ್ಲಿರಿಸಲಾಗಿದ್ದರೆ, ಠಾಕೂರ್ ಅವರನ್ನು ಇತ್ತೀಚೆಗಷ್ಟೆ ಬಂಧಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.