ಚೆನ್ನೈ: ಇಲ್ಲಿಗೆ ಸಮೀಪದ ಚೆಂಗಲಪಟ್ಟು ಸರ್ಕಾರಿ ಆಸ್ಪತ್ರೆಯಲ್ಲಿ 24 ಗಂಟೆಗಳೊಳಗೆ ಹದಿಮೂರು ರೋಗಿಗಳು ಮೃತಪಟ್ಟಿದ್ದು, ಆಮ್ಲಜನಕದ ಸರಬರಾಜಿನಲ್ಲಿ ವ್ಯತ್ಯಯ ಆಗಿರುವುದೇ ಇವರ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ.
ಚೆಂಗಲಪಟ್ಟು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದ್ದು, ಅಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದಾರೆ.
‘ಮೃತಪಟ್ಟವರು 40 ರಿಂದ 85 ವರ್ಷದೊಳಗಿನವರು. ನಾನು ರಾತ್ರಿ ಪೂರ್ತಿ ಸ್ಥಳದಲ್ಲಿದ್ದು ಮೇಲ್ವಿಚಾರಣೆ ನಡೆಸಿದ್ದೇನೆ. ಅವರೆಲ್ಲ ಆಮ್ಲಜನಕದ ಕೊರತೆಯಿಂದ ಮೃತಪಟ್ಟಿಲ್ಲ.ಘಟನೆ ಸಂಬಂಧ, ವೈದ್ಯಕೀಯ ಶಿಕ್ಷಣ ನಿರ್ದೇಶಕರು ತನಿಖೆ ನಡೆಸಲಿದ್ದಾರೆ’ ಎಂದು ಜಿಲ್ಲಾಧಿಕಾರಿ ಎ ಜಾನ್ ಲೂಯಿಸ್ ತಿಳಿಸಿದ್ದಾರೆ.
‘ಮೃತರಲ್ಲಿ ಒಬ್ಬರಿಗೆ ಮಾತ್ರವೇ ಕೋವಿಡ್ ದೃಢಪಟ್ಟಿತ್ತು. ಉಳಿದವರ ವರದಿ ನೆಗೆಟಿವ್ ಬಂದಿತ್ತು. ಅವರೆಲ್ಲ ನ್ಯುಮೋನಿಯಾ ಮತ್ತು ಕೊಮೊರ್ಬಿಡಿಟಿ ಕಾಯಿಲೆಗೆ ತುತ್ತಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ’ ಎಂದು ಆಸ್ಪತ್ರೆಯ ಡೀನ್ ಡಾ. ಜೆ. ಮುತ್ತು ಕುಮಾರನ್ ತಿಳಿಸಿದ್ದಾರೆ.