ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರುಸ್ಥಾಪನೆಗೆ ಯತ್ನ: ರಾಹುಲ್ ಗಾಂಧಿ

ಜಮ್ಮು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯು ಸೋಮವಾರ ಜಮ್ಮುವಿಗೆ ತಲುಪಿದ್ದು, ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಜನರು ಆತ್ಮೀಯ ಸ್ವಾಗತ ನೀಡಿದರು.
‘ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರುಸ್ಥಾಪಿಸಲು ಕಾಂಗ್ರೆಸ್ ತನ್ನ ಸಂಪೂರ್ಣ ಶಕ್ತಿಯನ್ನು ಒಳಸಲಿದೆ’ ಎಂದು ಅವರು ರಾಜ್ಯದ ಜನತೆಗೆ ಭರವಸೆ ನೀಡಿದರು.
ಸತ್ವಾರಿ ಚೌಕ್ಗೆ ತಲುಪಿದ ಮೇಳೆ ಮಾತನಾಡಿದ ಅವರು,‘ದೇಶದಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರುದ್ಯೋಗ ಸಮಸ್ಯೆ ಅಧಿಕವಿದೆ’ ಎಂದರು.
‘ಇಲ್ಲಿ ಸಂಪೂರ್ಣ ವ್ಯಾಪಾರವನ್ನು ಹೊರಗಿನವರು ನಡೆಸುತ್ತಿದ್ದಾರೆ. ನಮ್ಮ ಧ್ವನಿಯನ್ನು ಆಡಳಿತವು ಆಲಿಸುತ್ತಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಜನರು ಯಾತ್ರೆಯುದ್ದಕ್ಕೂ ಹೇಳಿದ್ದಾರೆ ಎಂದು ರಾಹುಲ್ ತಿಳಿಸಿದರು.
ಬಿಗಿ ಭದ್ರತೆ– ಭವ್ಯ ಸ್ವಾಗತ: ಭಯೋತ್ಪಾದಕರ ದಾಳಿಯ ಆತಂಕದ ಹಿನ್ನೆಲೆಯಲ್ಲಿ ಯಾತ್ರೆಗೆ ಭದ್ರತೆ ಒದಗಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಯಾತ್ರೆಯು ಸಾಂಬಾ ಜಿಲ್ಲೆಯ ವಿಜಯ್ಪುರದಿಂದ ಆರಂಭಗೊಂಡು ಜಮ್ಮು–ಪಠಾನ್ಕೋಟ್ ಹೆದ್ದಾರಿಯ ಮೂಲಕ ಸಾಗಿ ಜಮ್ಮುವಿನ ಬರಿ ಬ್ರಾಹ್ಮಣ ನಗರಕ್ಕೆ ತಲುಪಿದಾಗ ಅಲ್ಲಿನ ಜನರು ರಾಹುಲ್ ಅವರನ್ನು ಬರಮಾಡಿಕೊಂಡರು.
ಜಮ್ಮುವಿನ ಕುಂಜ್ವಾನಿಗೆ ಯಾತ್ರೆ ತಲುಪಿದಾಗ ಪಿಡಿಪಿ ಪ್ರತಿನಿಧಿಗಳು ಕೂಡ ಪಾಲ್ಗೊಂಡರು.
‘ದೇಶದಲ್ಲಿ ದ್ವೇಷವನ್ನು ತೊಡೆದು ಹಾಕಿ ಏಕತೆಯನ್ನು ಬಲಪಡಿಸುವ ಸಂದೇಶದೊಂದಿಗೆ ಯಾತ್ರೆ ನಡೆಸುತ್ತಿರುವ ರಾಹುಲ್ ಅವರಿಗೆ ಬೆಂಬಲ ಸೂಚಿಸಲು ಬಂದಿದ್ದೇವೆ’ ಎಂದು ಪಿಡಿಪಿ ಮುಖಂಡ ಫಿರ್ದೋಸ್ ಅಹಮ್ಮದ್ ತಕ್ ಹೇಳಿದರು.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನಾ) ಕೆ.ಸಿ. ವೇಣುಗೋಪಾಲ್, ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, ಜಮ್ಮು–ಕಾಶ್ಮೀರದ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿಕಾರ್ ರಸೂಲ್ ವಾನಿ ಮತ್ತಿತರರು ಪಾಲ್ಗೊಂಡಿದ್ದರು.
ಸೂಕ್ತ ಹುಡುಗಿ ಸಿಕ್ಕಿದರೆ ಮದುವೆ
‘ನನ್ನ ಪೋಷಕರು ಪ್ರೇಮ ವಿವಾಹವಾದವರು ಮತ್ತು ಪರಸ್ಪರ ಪ್ರೀತಿಯಿಂದ ಬದುಕಿದವರು. ನನಗೂ ಸೂಕ್ತ ಹುಡುಗಿ ಸಿಕ್ಕಿದರೆ ಮದುವೆಯಾಗುತ್ತೇನೆ’ ಎಂದು ‘ಕರ್ಲಿ ಟೇಲ್ಸ್’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.