ಅಮರಾವತಿ: ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ಉಂಟಾಗಿರುವ ದಿಢೀರ್ ಪ್ರವಾಹಕ್ಕೆ ಸಿಲುಕಿ ಶುಕ್ರವಾರ ಮೂವರು ಮೃತಪಟ್ಟಿದ್ದು, ಹಲವರು ಕೊಚ್ಚಿ ಹೋಗಿದ್ದಾರೆ.
ಅನ್ನಮಯ್ಯ ಯೋಜನೆಯಡಿ ಚೆಯ್ಯೆರು ನದಿಗೆ ನಿರ್ಮಿಸಲಾಗಿದ್ದ ತಡೆಗೋಡೆ ಒಡೆದ ಪರಿಣಾಮ ದಿಢೀರನೆ ಪ್ರವಾಹ ಉಂಟಾಯಿತು. ಇದರಿಂದ ನದಿ ಪಾತ್ರದ ಕೆಲ ಗ್ರಾಮಗಳಿಗೆ ನೀರು ನುಗ್ಗಿತು ಎಂದು ಮೂಲಗಳು ತಿಳಿಸಿವೆ.
ರಾಜಂಪೇಟೆಯ ಶಿವನ ದೇವಸ್ಥಾನದಲ್ಲಿ ಕಾರ್ತಿಕ ಪೌರ್ಣಮಿ ಪ್ರಯುಕ್ತ ಪ್ರಾರ್ಥನೆ ಸಲ್ಲಿಸುತ್ತಿದ್ದ ಭಕ್ತರ ಗುಂಪು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಬಳಿಕ ನಂದಲೂರು ಬಳಿ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಉಳಿದವರ ಪತ್ತೆಗೆ ಹುಡುಕಾಟ ನಡೆದಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಚಿತ್ತೂರು ಮತ್ತು ಕಡಪಾಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ.