ಕೋಲ್ಕತ್ತ: ಪಕ್ಷ ಮತ್ತು ಪ್ರಶಾಂತ್ ಕಿಶೋರ್ ಅವರ ಐ–ಪ್ಯಾಕ್ ನಡುವೆ ತೃಣಮೂಲ ಕಾಂಗ್ರೆಸ್ ಸ್ಪಷ್ಟವಾದ ಗೆರೆ ಎಳೆದಿದೆ. ಪಕ್ಷವು ಐದು ವರ್ಷಗಳ ಅವಧಿಗೆ ಕಿಶೋರ್ ಅವರ ರಾಜಕೀಯ ಸಲಹಾ ಸಂಸ್ಥೆಯನ್ನು ನೇಮಕ ಮಾಡಿಕೊಂಡಿದೆ. ಅವರಿಗೆ ಮಾಡಲು ಒಂದಷ್ಟು ಕೆಲಸಗಳಿವೆ ಎಂದು ಪಕ್ಷದ ಪ್ರಮುಖ ನಾಯಕ ಡೆರಿಕ್ ಒಬ್ರೆನ್ ಬುಧವಾರ ನಿಷ್ಠುರವಾಗಿ ಹೇಳಿದ್ದಾರೆ.
ಐ–ಪ್ಯಾಕ್ ಎಂಬುದು ರಾಜಕೀಯ ಸಹವರ್ತಿಯಷ್ಟೆ. ಅದು ಪಕ್ಷಕ್ಕಿಂತ ಭಿನ್ನ ಎಂದು ರಾಜ್ಯಸಭೆಯಲ್ಲಿ ಟಿಎಂಸಿ ನಾಯಕರೂ ಆಗಿರುವ ಒಬ್ರೆನ್ ಸ್ಪಷ್ಟಪಡಿಸಿದರು.
ಐ-ಪ್ಯಾಕ್ಗೆ ಕೆಲವು ಕೆಲಸ–ಕಾರ್ಯಗಳನ್ನು ಮಾಡಲಿಕ್ಕಿದೆ. ಆದರೆ, ಸಂಸ್ಥೆ ಅಥವಾ ಅದರ ಯಾವುದೇ ಅಧಿಕಾರಿಗಳು ಪಕ್ಷದ ಅಭಿಪ್ರಾಯವನ್ನು ಪ್ರತಿನಿಧಿಸುವುದಿಲ್ಲ ಎಂದು ಅವರು ಪ್ರಶಾಂತ್ ಕಿಶೋರ್ ಅವರ ಹೆಸರು ಉಲ್ಲೇಖಿಸಿದೇ ಹೇಳಿದರು.
‘ಐ-ಪ್ಯಾಕ್ ಅನ್ನು ಐದು ವರ್ಷಗಳ ಕಾಲಕ್ಕೆ ನೇಮಿಸಿಕೊಂಡ ಮೊದಲ ರಾಜಕೀಯ ಪಕ್ಷ ಟಿಎಂಸಿ. ಅವರು ಕೆಲವು ಜವಾಬ್ದಾರಿಗಳನ್ನು ಹೊಂದಿದ್ದಾರೆ. ಐ-ಪ್ಯಾಕ್ ನೆಲಕ್ಕಿಳಿಯಬೇಕು ತೆರಳಬೇಕು, ಜನರೊಂದಿಗೆ ಸಂವಹನ ನಡೆಸಬೇಕು, ಸಾಮಾಜಿಕ ಮಾಧ್ಯಮಗಳ ಮೂಲಕ ತಲುಪಬೇಕು. ಇದೆಲ್ಲವನ್ನೂ ಪಕ್ಷದ ಅಧ್ಯಕ್ಷ (ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ)ರ ನೇತೃತ್ವದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಮೌಲ್ಯಮಾಪನ ಮಾಡುತ್ತದೆ ಎಂದು ಓಬ್ರೆನ್’ ಹೇಳಿದರು.
ಬಿಜೆಪಿ ಎದುರು ಪ್ರಬಲ ವಿರೋಧ ಪಕ್ಷವಿಲ್ಲದ ರಾಜ್ಯಗಳ ಮೇಲೆ ಟಿಎಂಸಿ ಗಮನಹರಿಸುತ್ತಿದೆ ಎಂದು ಅವರು ಹೇಳಿದರು. ಬಿಜೆಪಿಯನ್ನು ಸೋಲಿಸುವುದು ಮತ್ತು ಪ್ರತಿಪಕ್ಷಗಳು ದುರ್ಬಲವಾಗಿರುವ ರಾಜ್ಯಗಳನ್ನು ಪ್ರವೇಶಿಸುವುದು ನಮ್ಮ ವಿಸ್ತರಣೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಡಿಎಂಕೆ ಪ್ರಬಲ ಶಕ್ತಿಯಾಗಿರುವ ತಮಿಳುನಾಡಿಗೆ ಅಥವಾ ಶಿವಸೇನೆ ಮತ್ತು ಎನ್ಸಿಪಿ ಇರುವ ಮಹಾರಾಷ್ಟ್ರಕ್ಕೆ ಟಿಎಂಸಿ ಹೋಗುವುದಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಗೆಲವು, ಇತರ ರಾಜ್ಯಗಳಲ್ಲಿ ಬೇರೂರಲು ಪಕ್ಷ ನಡೆಸಿರುವ ಕಠಿಣ ಪರಿಶ್ರಮಗಳ ಶ್ರೇಯಸ್ಸನ್ನು ಕಿಶೋರ್ ಪಡೆದುಕೊಳ್ಳುತ್ತಿರುವುದಕ್ಕೆ ಟಿಎಂಸಿಯಲ್ಲಿ ಅಸಮಾಧಾನವಿದೆ ಎಂದು ಪಕ್ಷದ ಮೂಲಗಳು ಸೂಚಿಸಿವೆ.
ಟಿಎಂಸಿಗೆ ಹೊಸದಾಗಿ ಸೇರ್ಪಡೆಗೊಂಡ ಮೇಘಾಲಯದ ಕಾಂಗ್ರೆಸ್ ನಾಯಕ ಮುಕುಲ್ ಸಂಗ್ಮಾ ಮತ್ತು ಗೋವಾ ನಾಯಕ ಲುಜಿನ್ಹೋ ಫಲೇರಿಯೊ, ತಾವು ಪ್ರಶಾಂತ್ ಕಿಶೋರ್ ಕೋರಿಕೆ ಮೇರೆಗೆ ಟಿಎಂಸಿ ಸೇರಿರುವುದಾಗಿ ಹೇಳಿದ್ದರು. ಇದು ಪಕ್ಷದ ನಾಯಕತ್ವಕ್ಕೆ ಪೂರಕವಾದ ಬೆಳವಣಿಗೆಯಲ್ಲ ಎಂದು ಟಿಎಂಸಿ ನಂಬಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.