ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ 23ನೇ ಸಂಸ್ಥಾಪನಾ ದಿನಾಚರಣೆಯಂದು ಮಾತನಾಡಿರುವ ಪಕ್ಷದ ಸಂಸ್ಥಾಪಕ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಆಗಿರುವ ಮಮತಾ ಬ್ಯಾನರ್ಜಿ, ಜನ ಸಾಮಾನ್ಯರಿಗಾಗಿ ಹೋರಾಡುವುದಾಗಿ ಮತ್ತು ಆ ನಿಟ್ಟಿನಲ್ಲಿ ಕಾರ್ಯಾಚರಣೆ ಮುಂದುವರಿಸುವುದಾಗಿ ಭರವಸೆ ನೀಡಿದರು.
ಟಿಎಂಸಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ಮಾಡಿದ ಬಳಿಕ ಪಕ್ಷಕ್ಕಾಗಿ ಹಗಲು ರಾತ್ರಿ ದುಡಿದವರನ್ನು ಅಭಿನಂದಿಸುತ್ತಾ, ಜನರಿಗಾಗಿ ಹೋರಾಡುವುದಾಗಿಪುನರುಚ್ಛರಿಸಿದರು.
'1998 ಜನವರಿ 1ರಂದು ಪಕ್ಷವನ್ನು ಪ್ರಾರಂಭಿಸಿದ ಸಮಯವನ್ನು ಮೆಲುಕು ಹಾಕುತ್ತೇನೆ. ಅದು ಅಪಾರ ಹೋರಾಟದಿಂದ ಕೂಡಿತ್ತು. ಆದರೂ ಇಲ್ಲಿಯ ವರೆಗೂ ಜನರಿಗಾಗಿ ಬದ್ಧರಾಗಿರುವ ನಮ್ಮ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದೇವೆ' ಎಂದರು.
ಪಶ್ಚಿಮ ಬಂಗಾಳದಲ್ಲಿ ಈ ವರ್ಷ ವಿಧಾನಸಭಾ ಚುನಾವಣೆಯು ನಡೆಯಲಿದೆ. ಪಕ್ಷವು ದಶಕದ ಅಧಿಕಾರವನ್ನು ಪೂರ್ಣಗೊಳಿಸಲು ಸಜ್ಜಾಗುತ್ತಿದ್ದಂತೆಯೇ ರಾಜ್ಯವನ್ನು ಮತ್ತಷ್ಟು ಉತ್ತಮಗೊಳಿಸುವತ್ತ ತಮ್ಮ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು. ಪಕ್ಷದ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲು ಪಕ್ಷವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾಂಗ್ರೆಸ್ನಿಂದ ದೂರ ಸರಿದು 1998 ಜನವರಿ 1ರಂದು ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಭಾರಿ ಸಂಚಲನ ಮೂಡಿಸಿದ ಪಕ್ಷವು ಎಡರಂಗವನ್ನು ಆಡಳಿತದಿಂದ ಉಚ್ಛಾಟಿಸಲು ಪ್ರಮುಖ ಪಾತ್ರ ವಹಿಸಿತ್ತು. ಅಲ್ಲದೆ ಬಂಗಾಳದಲ್ಲಿ ಪ್ರಮುಖ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಿದೆ. ಈಗ ಬಿಜೆಪಿಯಿಂದ ನಿಕಟ ಪೈಪೋಟಿ ಎದುರಾಗಿರುವುದರಿಂದ ಮುಂದಿನ ವಿಧಾನಸಭಾ ಚುನಾವಣೆಯು ಹೆಚ್ಚಿನ ಕುತೂಹಲ ಕೆರಳಿಸಿದೆ.