ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾಳದಲ್ಲಿ ಟಿಎಂಸಿ 200ಕ್ಕೂ ಅಧಿಕ ಸ್ಥಾನ ಗೆಲ್ಲುತ್ತದೆ: ಅಭಿಷೇಕ್ ಬ್ಯಾನರ್ಜಿ

Last Updated 13 ಫೆಬ್ರುವರಿ 2021, 13:34 IST
ಅಕ್ಷರ ಗಾತ್ರ

ಕುಲ್ಪಿ(ಪ.ಬಂಗಾಳ): ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿಯು 250ಕ್ಕೂ ಅಧಿಕ ಸ್ಥಾನಗಳಲ್ಲಿ ಜಯ ಗಳಿಸಲಿದ್ದು, ಕೇಸರಿ ಪಕ್ಷವು ಎರಡಂಕಿ ದಾಟಲು ಕಷ್ಟವಾಗುತ್ತದೆ ಎಂದು ತೃಣಮೂಲ ಕಾಂಗ್ರೆಸ್ ಮುಖಂಡ ಅಭಿಷೇಕ್ ಬ್ಯಾನರ್ಜಿ ಶನಿವಾರ ಹೇಳಿದರು.

ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ 294 ಸದಸ್ಯರ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ಹೇಳಿಕೆಯನ್ನು ಅವರು ಅಲ್ಲಗಳೆದರು.

ದಕ್ಷಿಣ 24 ಪರಗಣ ಜಿಲ್ಲೆಯ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪಕ್ಷದ ಯುವ ವಿಭಾಗದ ಅಧ್ಯಕ್ಷ ಬ್ಯಾನರ್ಜಿ ಮಾತನಾಡುತ್ತಾ, ಪಶ್ಚಿಮ ಬಂಗಾಳದಲ್ಲಿ ಡಬಲ್-ಎಂಜಿನ್ ಸರ್ಕಾರಕ್ಕಾಗಿ ಕೇಸರಿ ಪಕ್ಷದ ಕೂಗು (ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತ) ಮಮತಾ ಬ್ಯಾನರ್ಜಿಯ ಏಕ ಎಂಜಿನ್ ಶಕ್ತಿಯ ಮುಂದೆ ನಿರ್ನಾಮವಾಗಲಿದೆ. ಟಿಎಂಸಿಯು ಸತತ ಮೂರನೇ ಬಾರಿಗೆ ಸರ್ಕಾರ ರಚಿಸಲಿದ್ದು, ಪಕ್ಷ 50 ವರ್ಷಗಳ ಕಾಲ ಅಧಿಕಾರದಲ್ಲಿ ಉಳಿಯಲಿದೆ. 'ಪಶ್ಚಿಮ ಬಂಗಾಳವು ಮಮತಾ ಬ್ಯಾನರ್ಜಿ ಅವರನ್ನು ಮೂರನೇ ಬಾರಿಗೆ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುತ್ತದೆ' ಎಂದು ಹೇಳಿದರು.

ಶುಕ್ರವಾರ ಟಿಎಂಸಿಯ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನೇಶ್ ತ್ರಿವೇದಿ ಅವರನ್ನು ಉಲ್ಲೇಖಿಸಿದ ಬ್ಯಾನರ್ಜಿ, 'ತ್ರಿವೇದಿ ಅವರು ಟಿಎಂಸಿಯಲ್ಲಿ ಉಸಿರುಗಟ್ಟುತ್ತಿದೆ ಎಂದು ಹೇಳುತ್ತಿದ್ದಾರೆ. ಅವರು ಹೋಗಿ ಬಿಜೆಪಿಯ ಐಸಿಯುನಲ್ಲಿ ಪ್ರವೇಶ ಪಡೆಯಲಿ' ಎಂದು ತಿರುಗೇಟು ನೀಡಿದ್ದಾರೆ.

ಬಿಜೆಪಿಯ ಏಕೈಕ ಮತ ಪಡೆಯುವ ಘೋಷಣೆ 'ಜೈ ಶ್ರೀ ರಾಮ್' ಮತ್ತು ಅದಕ್ಕೆ ಯಾವುದೇ ಅಭಿವೃದ್ಧಿ ಕಾರ್ಯಸೂಚಿಯಿಲ್ಲ ಎಂದು ತಿಳಿಸಿದ ಟಿಎಂಸಿ ಮುಖಂಡ, ಕೇಸರಿ ಪಕ್ಷಕ್ಕೆ ಮಹಿಳೆಯರಿಗೆ ಗೌರವ ನೀಡುವುದು ತಿಳಿದಿಲ್ಲ ಎಂದು ದೂರಿದರು.

ಅವರು ಜೈ ಶ್ರೀ ರಾಮ್ ಎಂದು ಹೇಳುತ್ತಾರೆ ಮತ್ತು ಜೈ ಸಿಯಾ ರಾಮ್ ಎನ್ನುವುದಿಲ್ಲ. ಮಹಿಳೆಯರಿಗೆ ಗೌರವ ನೀಡಲು ಅವರಿಗೆ ತಿಳಿದಿಲ್ಲದ ಕಾರಣ ಅವರು ಹೀಗೆ ಹೇಳುತ್ತಾರೆ ಎಂದಿದ್ದಾರೆ. 'ಜೈ ಸಿಯಾ ರಾಮ್' ಎಂಬುದನ್ನು ಹಿಂದಿಯಿಂದ ಅನುವಾದಿಸಿದರೆ, 'ಸೀತಾ ಮತ್ತು ಭಗವಾನ್ ರಾಮ್‌ ಮಹಿಮೆ' ಎಂದಾಗುತ್ತದೆ. 'ಜೈ ಶ್ರೀ ರಾಮ್' ಎಂಬುದು 'ರಾಮ ದೇವರಿಗೆ ಜಯಘೋಷ' ಎಂದು ಸೂಚಿಸುತ್ತದೆ.

ಬಿಜೆಪಿ ಆಡಳಿತದ ರಾಜ್ಯಗಳಾದ ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿ ಮಹಿಳೆಯರನ್ನು ಹಿಂಸಿಸಲಾಗುತ್ತದೆ. ನಗರದ ವಿಕ್ಟೋರಿಯಾ ಸ್ಮಾರಕದಲ್ಲಿ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮದಿನಾಚರಣೆಯಲ್ಲಿ ಕೇಸರಿ ಪಕ್ಷವು ಮಮತಾ ಬ್ಯಾನರ್ಜಿಗೆ ಅಗೌರವ ತೋರಿಸಿದ ರೀತಿಯನ್ನು ನೋಡಿ ಎಂದು ಆರೋಪಿಸಿದರು.

ಉತ್ತರ ಭಾರತದಿಂದ ಬರುವ ಬಿಜೆಪಿ ನಾಯಕರು ಬಂಗಾಳದ ಸಂಸ್ಕೃತಿಯ ಬಗ್ಗೆ ತಿಳಿದಿಲ್ಲದ 'ಹೊರಗಿನವರ ಗುಂಪು' ಮತ್ತು ಜನರನ್ನು ಗೊಂದಲಕ್ಕೀಡು ಮಾಡಲು ನಕಲಿ ಸುದ್ದಿಗಳನ್ನು ಹರಡುತ್ತಿದ್ದಾರೆ. 'ಸಿಬಿಐ ಮತ್ತು ಇ.ಡಿ.ಯಂತಹ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಬಿಜೆಪಿ ವಿರುದ್ಧ ಹೋರಾಡಲು ನಮ್ಮ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತೆ ದುರ್ಗಾ ಅವರಂತೆ ನಿಲ್ಲುತ್ತಾರೆ ಎಂದು ನಾನು ಹೇಳುತ್ತೇನೆ ಎಂದು ಅವರು ಹೇಳಿದರು.

ಅಧಿಕಾರಕ್ಕೆ ಆಯ್ಕೆಯಾದರೆ ಕೇಸರಿ ಪಕ್ಷವು ಪಿಎಂ-ಕಿಸಾನ್ ಯೋಜನೆಯಡಿ ರಾಜ್ಯದ ಪ್ರತಿಯೊಬ್ಬ ರೈತರ ಖಾತೆಗೆ ₹ 18,000 ಗಳನ್ನು ನೀಡುವುದಾಗಿ ಭರವಸೆ ನೀಡುವ ಮೂಲಕ ರಾಜ್ಯದ ರೈತರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ. ಆದರೆ 'ಬಂಗಾಳ ಎಂದಿಗೂ ತನ್ನ ಬೆನ್ನುಮೂಳೆಯನ್ನು ಬಿಜೆಪಿಗೆ ಮಾರಾಟ ಮಾಡುವುದಿಲ್ಲ' ಎಂದಿದ್ದಾರೆ.

ಜನರು ಉಚಿತ ಪಡಿತರ ಮತ್ತು ಶಿಕ್ಷಣವನ್ನು ಪಡೆಯುತ್ತಿರುವ ಏಕೈಕ ರಾಜ್ಯ ಪಶ್ಚಿಮ ಬಂಗಾಳ. ಬಿಜೆಪಿ ಮೊದಲು ಗುಜರಾತ್, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳ ಬಗ್ಗೆ ಯೋಚಿಸಬೇಕು ಹೊರತು ಬಂಗಾಳದ ಬಗ್ಗೆ ಚಿಂತಿಸಬೇಕಾಗಿಲ್ಲ. ಹೊರಗಿನವರು ಬಂಗಾಳವನ್ನು ಆಳಲಾಗುವುದಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT