ಚೆನ್ನೈ:ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್)ಅಕ್ಟೋಬರ್ 2ರಂದು ಯೋಜಿಸಿದ್ದ ಪಥ ಸಂಚಲನಕ್ಕೆ ಹಾಗೂ ಅದೇ ದಿನ ವಿಡುದಲೈ ಚಿರುತೈಗಳ್ ಕಟ್ಚಿ (ವಿಸಿಕೆ) ಆಯೋಜಿಸಿದ್ದ ಪ್ರತಿಭಟನೆಗೆ ತಮಿಳುನಾಡು ಸರ್ಕಾರ ಅನುಮತಿ ನೀಡಲು ನಿರಾಕರಿಸಿದೆ.
‘ಗಾಂಧಿ ಜಯಂತಿಯಂದು ಆರ್ಎಸ್ಎಸ್ ಪಥಸಂಚಲನ ನಡೆಸಿದರೆ ಬೇರೆ ಗುಂಪುಗಳು ಪ್ರತಿಭಟನೆ ನಡೆಸಬಹುದು. ಇದರಿಂದ ಕಾನೂನು ಮತ್ತು ಸುವ್ಯವಸ್ಥೆಯ ತೊಡಕುಗಳು ಎದುರಾಗಬಹುದು ಎಂಬ ಕಾರಣವೊಡ್ಡಿ ಪಥಸಂಚಲನವನ್ನು ಹಿಂತೆಗೆದುಕೊಳ್ಳುವಂತೆ ತಮಿಳುನಾಡು ಸರ್ಕಾರ ಸೂಚಿಸಿದೆ’ ಎಂದು ಆರ್ಎಸ್ಎಸ್ನ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
‘ನಮ್ಮದು ಶಾಂತಿಯುತ ಪಥಸಂಚಲನ. ಮದ್ರಾಸ್ನ ಹೈಕೋರ್ಟ್ ಕೂಡ ಇದಕ್ಕೆ ಅನುಮತಿ ನೀಡಿತ್ತು. ಸದ್ಯ ಎದುರಾಗಿರುವ ಈ ಸಮಸ್ಯೆಯನ್ನು ಕಾನೂನತ್ಮಕವಾಗಿಯೇ ಪರಿಹರಿಸಿಕೊಳ್ಳುತ್ತೇವೆ’ ಎಂದೂ ಅವರು ತಿಳಿಸಿದ್ದಾರೆ.
ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಏಕೆ ಮೊಕದ್ದಮೆ ಹೂಡಬಾರದೆಂದು ಕಾರಣ ಕೇಳಿ, ತಮಿಳುನಾಡಿನ ರಾಜ್ಯ ಗೃಹ ಕಾರ್ಯದರ್ಶಿ ಫಣೀಂದ್ರ ರೆಡ್ಡಿ, ಪೊಲೀಸ್ ಮಹಾನಿರ್ದೇಶಕ ಶೈಲೇಂದ್ರ ಬಾಬು ಹಾಗೂ ತಿರುವಳ್ಳೂರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅವರಿಗೆ ಆರ್ಎಸ್ಎಸ್ ಈಗಾಗಲೇ ನೋಟಿಸ್ ನೀಡಿದೆ.