ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸೇರ್ಪಡೆಯುಕ್ತ ಮತ್ತು ಜಾತ್ಯತೀತ ಚಿಂತನೆಯನ್ನು ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅವರ ಕುಟುಂಬ ಸದಸ್ಯರು ಪ್ರತಿಪಾದಿಸಿದ್ದಾರೆ.
‘ಎಲ್ಲ ಧರ್ಮಗಳವರು ಶಾಂತಿ, ಸೌಹಾರ್ದದಿಂದ ಬದುಕುವುದು ನಮ್ಮ ತಂದೆ ಕನಸಾಗಿತ್ತು. ಪ್ರತಿಮೆ ಸ್ಥಾಪಿಸುವುದಷ್ಟೇ ಅವರಿಗೆ ಗೌರವಲ್ಲ. ಅವರ ಚಿಂತನೆ, ಮೌಲ್ಯಗಳನ್ನು ಅನುಸರಿಸಬೇಕು‘ ಎಂದು ಅನಿತಾ ಬೋಸ್ ಪ್ರತಿಕ್ರಿಯಿಸಿದರು.
ಬೋಸ್ ಅವರ ಮರಿಸೋದರಳಿಯ ಚಂದ್ರಕುಮಾರ್ ಬೋಸ್ ಅವರು, ದೇಶದಲ್ಲಿ ನೇತಾಜಿ ಅವರ ಚಿಂತನೆಗಳನ್ನು ಜಾರಿಗೊಳಿಸಲು ಒತ್ತು ನೀಡಬೇಕು ಎಂದು ಕೇಂದ್ರವನ್ನು ಒತ್ತಾಯಿಯಿಸಿದ್ದಾರೆ.
ಕೇಂದ್ರ ಸರ್ಕಾರ ಶುಕ್ರವಾರವಷ್ಟೇ, ಆಜಾದ್ ಹಿಂದ್ ಫೌಜ್ನ ಸ್ಥಾಪಕರಾಗಿದ್ದ ನೇರಾಜಿ ಅವರ ಬೃಹತ್ ಪ್ರತಿಮೆಯನ್ನು ರಾಜಧಾನಿಯ ಇಂಡಿಯಾಗೇಟ್ ಬಳಿ ಸ್ಥಾಪಿಸುವ ತೀರ್ಮಾನ ಪ್ರಕಟಿಸಿತ್ತು. ಅಮೃತಶಿಲೆಯ ಪ್ರತಿಮೆ ಸಿದ್ಧವಾಗುವವರೆಗೂ ನೇತಾಜಿ ಅವರ ಹೊಲೊಗ್ರಾಂ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಪ್ರಧಾನಿ ಹೇಳಿದ್ದರು.
ಬೋಸ್ ಅವರು ಸುಮಾರು 70 ವರ್ಷದ ಹಿಂದೆಯೇ ಮೃತಪಟ್ಟಿದ್ದಾರೆ ಎಂಬ ನಂಬಿಕೆ ಇದೆ. ಆದರೆ, ಅವರ ಸಾವು, ಸಮಯ, ವರ್ಷ, ಸ್ಥಳ ಕುರಿತ ವಿವರಗಳು ಇನ್ನೂ ರಹಸ್ಯವಾಗಿಯೇ ಉಳಿದಿವೆ.
ಸ್ತಬ್ಧಚಿತ್ರ ತಿರಸ್ಕರಿಸಿ ಅವಮಾನ ಕೇಂದ್ರ ವಿರುದ್ಧ ಮಮತಾ ಟೀಕೆ
‘ನೇತಾಜಿ ಅವರ ಪ್ರತಿಮೆ ಸ್ಥಾಪಿಸುವ ಮೂಲಕ, ಗಣರಾಜ್ಯ ಪಥ ಸಂಚಲನಕ್ಕೆ ಅವರನ್ನು ಕುರಿತ ಸ್ತಬ್ಧಚಿತ್ರ ನಿರಾಕರಿಸಿ ಮಾಡಿದ ಅನ್ಯಾಯ ಮರೆಮಾಚಲಾಗದು’ ಎಂದು ಪಶ್ಚಿಮ ಬಂಗಾಳ ಸರ್ಕಾರ ಟೀಕಿಸಿದೆ.
ಪ್ರಧಾನಿ ನರೇಂದ್ರಮೋದಿ ಅವರ ವಿರುದ್ಧ ಹರಿಹಾಯ್ದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಸ್ತಬ್ಧಚಿತ್ರ ನಿರಾಕರಿಸುವ ಕಾರಣವನ್ನು ಇನ್ನೂ ಬಹಿರಂಗಪಡಿಸಿಲ್ಲ ಎಂದು ಹೇಳಿದರು.
ಗಣರಾಜ್ಯೋತ್ಸವ ಸಮಾರಂಭದಂದು ನಾವು ಆ ಸ್ತಬ್ಧಚಿತ್ರವನ್ನು ಇಲ್ಲಿ ಪ್ರದರ್ಶಿಸಲಿದ್ದೇವೆ. ಅದು ಎಷ್ಟು ಅದ್ಧೂರಿಯಾಗಿದೆ ಎಂಬುದನ್ನು ಜನರೇ ನೋಡಲಿ. ಅದು, ನೇತಾಜಿ ಅವರ ವ್ಯಕ್ತಿತ್ವ ಮತ್ತು 75ನೇ ಸ್ವಾತಂತ್ರ್ಯೋತ್ಸವದ ಉತ್ಸಾಹವನ್ನು ಬಿಂಬಿಸಲಿದೆ. ಇದನ್ನು ನಿರಾಕರಿಸಿ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳಕ್ಕೆ ಅನ್ಯಾಯ ಮಾಡಿದೆ ಎಂದು ಟೀಕಿಸಿದರು.