ಶ್ರೀನಗರ:ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಕೆಲವು ದಿನ ಮೊದಲು, ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಸಾರಿಗೆ ಬಸ್ಗಳಲ್ಲಿ ಅವಳಿ ಸ್ಫೋಟ ಸಂಭವಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಘಟನೆಯ ತನಿಖೆ ನಡೆಸಲು ಉಧಂಪುರಕ್ಕೆ ಎನ್ಐಎ ತಂಡವನ್ನು ಕಳುಹಿಸಲಾಗಿದೆ ಎಂದು ವರದಿತಿಳಿಸಿವೆ.
ಉಧಂಪುರದ ಡೊಮೈಲ್ ಚೌಕ್ ಬಳಿಯ ಪೆಟ್ರೋಲ್ ಪಂಪ್ ಸಮೀಪ ನಿಲ್ಲಿಸಿದ್ದ ಬಸ್ನಲ್ಲಿ ಬುಧವಾರ ರಾತ್ರಿ ಮೊದಲ ಸ್ಫೋಟ ಸಂಭವಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಸ್ಫೋಟದಿಂದಾಗಿ ಸಮೀಪದಲ್ಲಿ ನಿಲುಗಡೆ ಮಾಡಿದ್ದ ಇತರೆ ವಾಹನಗಳಿಗೂ ಹಾನಿಯಾಗಿದೆಎಂದು ವರದಿ ತಿಳಿಸಿದೆ
ಎರಡನೇ ಸ್ಫೋಟ ಅದೇ ಜಿಲ್ಲೆಯಲ್ಲಿ ಗುರುವಾರ ಬೆಳಗಿನ ಜಾವ 5.30ಕ್ಕೆ ಬಸ್ನಲ್ಲಿ ಸಂಭವಿಸಿದ್ದು, ಯಾವುದೇ ಸಾವು, ನೋವು ವರದಿಯಾಗಿಲ್ಲ.
ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಮಾತನಾಡಿ, ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಉಧಂಪುರದಲ್ಲಿ ಎರಡು ಸ್ಫೋಟಗಳು ಸಂಭವಿಸಿವೆ.ಸೇನೆ, ಬಾಂಬ್ ನಿಷ್ಕ್ರಿಯ ದಳ ಹಾಗೂ ಇತರೆ ತನಿಖಾ ತಂಡಗಳು ಸ್ಥಳಕ್ಕೆ ಭೇಟಿ ನೀಡಿವೆ ಎಂದರು.
ಸೆ.30 ರಿಂದ ಮೂರು ದಿನ ಕಣಿವೆ ರಾಜ್ಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವಾಸ ನಿಗದಿಯಾಗಿತ್ತು. ಘಟನೆಯಿಂದಾಗಿ ಭೇಟಿ ದಿನದಲ್ಲಿ ಬದಲಾವಣೆಯಾಗಿದೆ. ಅ. 4ರಿಂದ ಶಾ ಪ್ರವಾಸ ಕೈಗೊಳ್ಳಲಿದ್ದಾರೆ.