ಜೈಪುರ: ರಾಜಸ್ಥಾನ ಸರ್ಕಾರವು ತನ್ನ ಎಲ್ಲಾ ಇಲಾಖೆಗಳ ಕಾರ್ಯಕ್ಷಮತೆಯ ಪರಿಶೀಲನೆಗಾಗಿ ಎರಡು ದಿನಗಳ 'ಚಿಂತನಾ ಶಿಬಿರ' ಸಚಿವ ಮಂಡಳಿ ಸಭೆಯನ್ನು ನಡೆಸುತ್ತಿದೆ.
ಜೈಪುರದ ಹರೀಶ್ ಚಂದ್ರ ಮಾಥುರ್ ರಾಜಸ್ಥಾನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ನಲ್ಲಿ (ಎಚ್ಸಿಎಂ ಆರ್ಐಪಿಎ) ಇಂದು ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅಧ್ಯಕ್ಷತೆಯಲ್ಲಿ ಸಭೆ ಆರಂಭಗೊಂಡಿತು.
ಗೆಹಲೋತ್ ಅವರು ಇಂದು ಮತ್ತು ನಾಳೆ ಬಜೆಟ್ ಘೋಷಣೆಗಳ ಅನುಷ್ಠಾನ ಮತ್ತು ಎಲ್ಲಾ ಇಲಾಖೆಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲಿದ್ದಾರೆ.
"ಆರೋಗ್ಯ ಕ್ಷೇತ್ರದಲ್ಲಿ ರಾಜಸ್ಥಾನವು ಮಾದರಿ ರಾಜ್ಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲೂ ಗಮನಾರ್ಹ ಪ್ರಗತಿ ಕಂಡುಬಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಶೇ 94 ರಷ್ಟು ಘೋಷಿಸಿದ ಯೋಜನೆಗಳಿಗೆ ಆರ್ಥಿಕ ಅನುಮೋದನೆ ನೀಡಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಶೇ.75 ರಷ್ಟು ಘೋಷಷಿತ ಬಜೆಟ್ ಪೂರ್ಣಗೊಂಡಿದೆ ಎಂದು ಮುಖ್ಯ ಕಾರ್ಯದರ್ಶಿ ಉಷಾ ಶರ್ಮಾ ಸಭೆಗೆ ಮಾಹಿತಿ ನೀಡಿದರು.
ಎಲ್ಲಾ ಇಲಾಖೆಗಳ ಸಚಿವರು ತಮ್ಮ ಇಲಾಖೆಗಳ 4 ವರ್ಷದ ಕಾಮಗಾರಿ, ಬಜೆಟ್ ಘೋಷಣೆಗಳು, ಸಾರ್ವಜನಿಕ ಪ್ರಣಾಳಿಕೆ, ಪ್ರಚಾರಗಳು, ನವೋದ್ಯಮಗಳ ಅನುಷ್ಠಾನ ಹಾಗೂ ಇತರ ಕಾಮಗಾರಿಗಳ ಪ್ರಗತಿ ವರದಿಯನ್ನು ಸಿಎಂ ಮುಂದೆ ಮಂಡಿಸಲಿದ್ದಾರೆ.
ಆರೋಗ್ಯ ಸಚಿವ ಪರ್ಸಾದಿ ಲಾಲ್, ಶಿಕ್ಷಣ ಸಚಿವ ಬಿ.ಡಿ.ಕಲ್ಲಾ, ಉನ್ನತ ಶಿಕ್ಷಣ ಸಚಿವ ರಾಜೇಂದ್ರ ಸಿಂಗ್ ಯಾದವ್, ತಾಂತ್ರಿಕ ಶಿಕ್ಷಣ ರಾಜ್ಯ ಸಚಿವ ಸುಭಾಷ್ ಗಾರ್ಗ್, ಕೃಷಿ ಸಚಿವ ಲಾಲಚಂದ್ ಕಟಾರಿಯಾ, ಸಹಕಾರಿ ಸಚಿವ ಉದಯ್ ಲಾಲ್ ಅಂಜನಾ, ಕೃಷಿ ಮಾರುಕಟ್ಟೆ ರಾಜ್ಯ ಸಚಿವ ಮುರಾರಿ ಲಾಲ್ ಮೀನಾ, ಗೋಪಾಲನ್ ಸಚಿವ ಪ್ರಮೋದ್ ಭಯ್ಯಾ, ಇಂಧನ ಖಾತೆ ರಾಜ್ಯ ಸಚಿವ ಭನ್ವರ್ ಸಿಂಗ್ ಭಾಟಿ, ಲೋಕೋಪಯೋಗಿ ಸಚಿವ ಭಜನ್ ಲಾಲ್ ಜಾತವ್, ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ಸಚಿವ ಮಹೇಶ್ ಜೋಶಿ ಮತ್ತು ಜಲಸಂಪನ್ಮೂಲ ಸಚಿವ ಮಹೇಂದ್ರಜಿತ್ ಸಿಂಗ್ ಮಾಳವಿಯಾ ಸೇರಿದಂತೆ ಇಂದು ಇಲಾಖೆಗಳ ಪ್ರಗತಿ ವರದಿಗಳನ್ನು ಮಂಡಿಸಲಿದ್ದಾರೆ.
ಎರಡನೇ ದಿನವಾದ ಮಂಗಳವಾರ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಶಾಂತಿಕುಮಾರ್ ಧಾರಿವಾಲ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ರಮೇಶ್ ಮೀನಾ, ಗೃಹ ಖಾತೆ ರಾಜ್ಯ ಸಚಿವ ರಾಜೇಂದ್ರ ಸಿಂಗ್ ಯಾದವ್, ಹಾಗೂ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಸಚಿವ ಬ್ರಿಜೇಂದ್ರ ಓಲಾ ಅವರು ಪ್ರಗತಿ ವರದಿ ನೀಡಲಿದ್ದಾರೆ ಎಂದು ಆಧಿಕೃತ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.