ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ‘ದೇಶದಲ್ಲಿ ನಿರುದ್ಯೋಗ, ಬಡತನ ಹೆಚ್ಚಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಇನ್ನೊಂದೆಡೆ, ಕೇಂದ್ರ ಸರ್ಕಾರದ ಆಪ್ತರ ಆದಾಯವೂ ಹೆಚ್ಚಾಗಿದೆ’ ಎಂದು ಟೀಕಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಈ ಸರ್ಕಾರ ಏನು ಹೆಚ್ಚಳ ಮಾಡಿದೆ? ನಿರುದ್ಯೋಗ, ಹಣದುಬ್ಬರ ಮತ್ತು ಬಡತನ ಹೆಚ್ಚು ಮಾಡಿದೆ. ತನ್ನ ಆಪ್ತರ ಗಳಿಕೆಯನ್ನು ಹೆಚ್ಚಿಸಿದೆ’ ಎಂದಿದ್ದಾರೆ.
‘ಕೋವಿಡ್ ಬಿಕ್ಕಟ್ಟು ಆರಂಭಕ್ಕೂ ಮುನ್ನ ದೇಶದಲ್ಲಿ ಮಧ್ಯಮ ವರ್ಗದ ಜನಸಂಖ್ಯೆ 9.9 ಕೋಟಿ ಇತ್ತು. ಕೋವಿಡ್ ಪಿಡುಗು ಕಾಣಿಸಿಕೊಂಡ ನಂತರ ಅವರ ಸಂಖ್ಯೆ 6.6 ಕೋಟಿಗೆ ಇಳಿದಿದೆ’ ಎಂಬ ಮಾಧ್ಯಮ ವರದಿಯೊಂದನ್ನು ಅವರು ತಮ್ಮ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.