ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಗಳ ಮರುನಾಮಕರಣದತ್ತ ಯೋಗಿ: 2024ರ ಲೋಕಸಭಾ ಚುನಾವಣೆ ಮೇಲೆ ಕಣ್ಣು

Last Updated 8 ಫೆಬ್ರುವರಿ 2023, 21:17 IST
ಅಕ್ಷರ ಗಾತ್ರ

ಲಖನೌ: ಮುಂಬರುವ (2024) ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಪಣತೊಟ್ಟಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರ್ಕಾರ, ರಾಜ್ಯದಲ್ಲಿ ಮುಸ್ಲಿಂ ಹೆಸರುಗಳಿರುವ ನಗರಗಳನ್ನು ಮರು ನಾಮಕರಣ ಮಾಡುವತ್ತ ಮತ್ತೊಮ್ಮೆ ಚಿತ್ತ ಹರಿಸಿದೆ.

ಲೋಕಸಭೆಗೆ 80 ಸದಸ್ಯರನ್ನು ಕಳುಹಿಸುವ ಉತ್ತರ ಪ್ರದೇಶದಲ್ಲಿ ಸಿಂಹಪಾಲು ಗೆಲ್ಲುವ ಉದ್ದೇಶವನ್ನು ಯೋಗಿ ಸರ್ಕಾರ ಹೊಂದಿದೆ.

ಲಖನೌ ನಗರಕ್ಕೆ ರಾಮನ ತಮ್ಮ ಲಕ್ಷ್ಮಣನ ಹೆಸರಿಡುವ ಕುರಿತು ಕೇಳಲಾದ ಪ್ರಶ್ನೆಗೆ ಬುಧವಾರ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಿಜೇಶ್‌ ಪಾಠಕ್‌, ಲಖನೌ ನಗರವನ್ನು ಹಿಂದಿನಿಂದಲೂ ‘ಲಕ್ಷಣ ನಗರಿ’ ಎಂದೇ ಕರೆಯಲಾಗುತ್ತಿತ್ತು ಎನ್ನುವ ಮೂಲಕ ಹೆಸರು ಬದಲಾಯಿಸುವ ಸುಳಿವು ನೀಡಿದ್ದಾರೆ.

‘ಇದು ಎಲ್ಲರಿಗೂ ಗೊತ್ತಿರುವ ಸತ್ಯ (ಲಖನೌ ಮೊದಲು ಲಕ್ಷಣ ನಗರಿ ಆಗಿತ್ತು).... ಲಖನೌ ನಗರದ ಹೆಸರನ್ನು ಮರು ನಾಮಕರಣ ಮಾಡುವಂತೆ ಬೇಡಿಕೆಗಳು ಬಂದಿವೆ... ಈ ವಿಷಯವನ್ನು ನಾವು ಪರಿಸ್ಥಿತಿಗೆ ಅನುಗುಣವಾಗಿ ತೆಗೆದುಕೊಳ್ಳುತ್ತೇವೆ’ ಎಂದು ಅವರು ಭದೋಹಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

ಪ್ರತಾಪಗಡದ ಬಿಜೆಪಿ ಸಂಸದ ಸಂಗಮ್‌ ಲಾಲ್‌ ಗುಪ್ತಾ ಅವರು ಲಖನೌ ನಗರವನ್ನು ‘ಲಕ್ಷ್ಮಣ್‌ಪುರ’ ಅಥವಾ ‘ಲಖನ್‌ಪುರ’ ಎಂದು ಮರು ನಾಮಕರಣ ಮಾಡುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಬೇಡಿಕೆಯಿಟ್ಟಿದ್ದಾರೆ. ಈ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪಾಠಕ್‌ ಉತ್ತರಿಸಿದ್ದಾರೆ.

ಎಸ್‌ಬಿಎಸ್‌ಪಿಯಿಂದ ಪತ್ರ: ಉತ್ತರ ಪ್ರದೇಶದಲ್ಲಿ ಮುಂಬರುವ ಚುನಾವಣೆಗಳಲ್ಲಿ ಕೇಸರಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿರುವ ಸುಹೇಲ್‌ದೇವ್‌ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಅಧ್ಯಕ್ಷ ಓಂ ಪ್ರಕಾಶ್‌ ರಾಜ್‌ಭರ್‌ ಅವರು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಬುಧವಾರ ಪತ್ರ ಬರೆದು ಗಾಜಿಪುರ ಜಿಲ್ಲೆಗೆ ಮಹರ್ಷಿ ವಿಶ್ವಾಮಿತ್ರ ಅವರ ಹೆಸರನ್ನಿಡುವಂತೆ ಆಗ್ರಹಿಸಿದ್ದಾರೆ.

ಆದಿತ್ಯನಾಥ್‌ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ ಫೈಜಾಬಾದ್‌ ಜಿಲ್ಲೆಯ ಹೆಸರನ್ನು ಅಯೋಧ್ಯಾ ಎಂದು, ಅಲಹಾಬಾದ್‌ ಅನ್ನು ಪ್ರಯಾಗರಾಜ್‌ ಎಂದು ಮರು ನಾಮಕರಣ ಮಾಡಿದ್ದರು. ಮುಘಲ್‌ಸರಾಯ್ ಮತ್ತು ಜಾನ್ಸಿ ರೈಲು ನಿಲ್ದಾಣದ ಹೆಸರನ್ನು ಅವರು ಕ್ರಮವಾಗಿ ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ನಗರ ಮತ್ತು ವೀರಾಂಗನ ಲಕ್ಷ್ಮಿಬಾಯಿ ಎಂದು ಬದಲಿಸಿದ್ದರು.

ಯೋಗಿ ಅವರ ತವರು ನಗರವಾದ ಗೋರಖ್‌ಪುರದಲ್ಲಿ ಮುಸ್ಲಿಂ ಹೆಸರುಗಳನ್ನು ಹೊಂದಿದ್ದ 12 ಮುನ್ಸಿಪಲ್‌ ವಾರ್ಡ್‌ಗಳ ಹೆಸರುಗಳನ್ನು ಹಿಂದೂ ನಾಯಕರು, ಸಂತರು ಮತ್ತು ಕವಿಗಳ ಹೆಸರಿಟ್ಟು ಮರು ನಾಮಕರಣ ಮಾಡಲಾಗಿತ್ತು.

ಸುಲ್ತಾನ್‌ಪುರ, ಮಿರ್ಜಾಪುರ, ಅಲಿಗಢ, ಫಿರೋಜಾಬಾದ್‌, ಮೈನ್‌ಪುರಿ ಹೆಸರುಗಳನ್ನು ಬದಲಿಸುವಂತೆ ಹಿಂದುತ್ವ ಪರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತಿವೆ. ಯೋಗಿ ಸರ್ಕಾರದ ಮೊದಲ ಅವಧಿಯಲ್ಲೂ ಈ ಕುರಿತ ಬೇಡಿಕೆಯ ಮನವಿಗಳು ಸಲ್ಲಿಕೆಯಾಗಿದ್ದವು.

‘ತನ್ನ ವೈಫಲ್ಯಗಳನ್ನು ಮರೆ ಮಾಚಲು ನಗರಗಳ ಹೆಸರುಗಳನ್ನು ಬದಲಿಸುವ ಪ್ರಸ್ತಾವಗಳ ಮೂಲಕ ಸರ್ಕಾರ ಚುನಾವಣಾ ಗಿಮಿಕ್‌ ಮಾಡುತ್ತಿದೆ’ ಎಂದು ವಿರೋಧ ಪಕ್ಷಗಳು ದೂರಿವೆ.

ಸುಲ್ತಾನ್‌ಪುರವನ್ನು ‘ಕುಶ್ ಭವನಪುರ’, ಅಲಿಗಢವನ್ನು ‘ಹರಿಗಢ’, ಮೈನ್‌ಪುರಿಯನ್ನು ‘ಮಯನ್‌ ನಗರ’, ಫಿರೋಜಾಬಾದ್‌ ಅನ್ನು ‘ಚಂದ್ರ ನಗರ’ ಹಾಗೂಮಿರ್ಜಾಪುರವನ್ನು ‘ವಿಂಧ್ಯಾಧಾಮ’ ಎಂದು ಮರು ನಾಮಕರಣ ಮಾಡಬೇಕು ಎಂದು ಪಕ್ಷ ಬಯಸಿದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ಇದೇ ಅಲ್ಲದೆ, ಆಗ್ರಾ ನಗರವನ್ನು ‘ಅಗ್ರವಾನ್‌’ ಎಂದೂ, ಮುಜಾಫರ್‌ನಗರವನ್ನು ‘ಲಕ್ಷ್ಮಿ ನಗರ’ ಎಂದೂ ಮರು ನಾಮಕರಣ ಮಾಡಬೇಕು ಎಂಬ ಬೇಡಿಕೆಯೂ ಹಿಂದುತ್ವ ಪರ ಸಂಘಟನೆಗಳದ್ದಾಗಿದೆ.

ಕಳೆದ ವರ್ಷ ನಡೆದ ಅಜಂಗಢದ ಲೋಕಸಭಾ ಉಪ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಸಾರ್ವಜನಿಕ ಸಭೆಗಳಲ್ಲಿ ಜಿಲ್ಲೆಯ ಹೆಸರನ್ನು ‘ಆರ್ಯನ್‌ಗಢ’ ಎಂದು ಬದಲಿಸುವ ಸುಳಿವು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT