ಅಯೋಧ್ಯೆ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಲ್ಲ ಹೆಸರುಗಳನ್ನು ಬದಲಾಯಿಸಿದರು. ಈಗ ಅವರ ಹೆಸರೇ ಬದಲಾಗಿದ್ದು, ‘ಬಾಬಾ ಬುಲ್ಡೋಜರ್’ ಎಂದಾಗಿದೆ ಎಂದು ಸಮಾಜವಾದಿ ಪಕ್ಷದ (ಎಸ್ಪಿ) ನಾಯಕ ಅಖಿಲೇಶ್ ಯಾದವ್ ಟೀಕಿಸಿದರು.
ಅಯೋಧ್ಯೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
‘ಬಿಜೆಪಿ ನಾಯಕರು ಈಗ ಎ, ಬಿ, ಸಿ, ಡಿ ಕಲಿಯುತ್ತಿದ್ದಾರೆ. ಕರಾಳ ಕೃಷಿ ಕಾಯ್ದೆಗಳು ಮೊದಲು ರದ್ದಾದವು. ಯೋಗಿ ಜೀ ಕೂಡ ಇನ್ನು ವಾಪಸಾಗಲಿದ್ದಾರೆ ಎಂಬುದನ್ನು ಬಿಜೆಪಿ ನಾಯಕರಿಗೆ ಹೇಳಲು ಬಯಸುತ್ತೇನೆ’ ಎಂದು ಅಖಿಲೇಶ್ ಹೇಳಿದರು.
ಈ ಮಧ್ಯೆ, ಎರಡು ಬಾರಿ ಜನರು ಸೋಲಿಸಿದ ಬಳಿಕವೂ ಸಮಾಜವಾದಿ ಪಕ್ಷದ ನಾಯಕರು ಮತ್ತೆ ಅಧಿಕಾರಕ್ಕೇರುವ ಕನಸು ಕಾಣುತ್ತಿದ್ದಾರೆ. ಆದರೆ ಜನ ಅವರನ್ನು ಮತ್ತೆ ತಿರಸ್ಕರಿಸಲಿದ್ದು, ಯೋಗಿ ಜೀ ಅವರನ್ನು ಮರಳಿ ಗದ್ದುಗೆಗೆ ಏರಿಸಲಿದ್ದಾರೆ ಎಂದು ಉನ್ನಾವೊದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಚುನಾವಣೆ ಕಣ ರಂಗೇರಿದ್ದು ಬಿಜೆಪಿ, ಎಸ್ಪಿ ಹಾಗೂ ಇತರ ರಾಜಕೀಯ ಪಕ್ಷಗಳ ನಡುವಣ ವಾಕ್ಸಮರ ತಾರಕಕ್ಕೇರಿದೆ.