ನವದೆಹಲಿ: ಇಂಧನ ದರ ಏರಿಕೆ ವಿಚಾರವಾಗಿ ಚರ್ಚಿಸಲು ಅವಕಾಶ ನೀಡದ್ದರ ವಿರುದ್ಧ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
ಕೃಷಿ ಕಾಯ್ದೆಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಗದ್ದಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಧನ ದರ ಏರಿಕೆ ಬಗ್ಗೆ ತಕ್ಷಣವೇ ಚರ್ಚೆಯಾಗಬೇಕು. ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಪ್ರತಿಪಕ್ಷಗಳ ಸದಸ್ಯರು ಆಗ್ರಹಿಸಿದ್ದಾರೆ.
ರೈತರ ಪ್ರತಿಭಟನೆ ಮತ್ತು ಕೃಷಿ ಕಾಯ್ದೆ ಬಗ್ಗೆ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಲಿದ್ದೇವೆ ಎಂದು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕಲಾಪ ಆರಂಭಕ್ಕೂ ಮುನ್ನವೇ ತಿಳಿಸಿದ್ದರು.
ಮಹಾರಾಷ್ಟ್ರ ಸರ್ಕಾರವು ಬುಲೆಟ್ ರೈಲು ಯೋಜನೆಗೆ ಪೂರ್ಣ ವಿರಾಮ ಹಾಕಿರುವುದು ಬೇಸರ ತರಿಸಿದೆ ಎಂದು ಸಚಿವ ಪೀಯೂಷ್ ಗೋಯಲ್ ಕಲಾಪದ ವೇಳೆ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಿವಸೇನಾ ಸಂಸದ ಪ್ರತಾಪ್ ರಾವ್ ಜಾಧವ್, ‘ಬುಲೆಟ್ ರೈಲು ಆರಂಭವಾದರೆ ಕಾರ್ಪೊರೇಟ್ ಕಂಪನಿಗಳು ಮುಂಬೈನಿಂದ ಗುಜರಾತ್ಗೆ ಸ್ಥಳಾಂತರಗೊಳ್ಳಲಿವೆ ಎಂಬ ಭೀತಿ ಮುಂಬೈ ಜನರಲ್ಲಿದೆ. ಹೀಗಾಗಿ ಅವರಿಗೆ ಬುಲೆಟ್ ರೈಲು ಬೇಡವಾಗಿದೆ’ ಎಂದು ಹೇಳಿದರು.
ಜಾಧವ್ ಹೇಳಿಕೆಗೆ ತಿರುಗೇಟು ನೀಡಿದ ಗೋಯಲ್, ‘ಮುಂಬೈನಿಂದ ಕಂಪನಿಗಳು ಸ್ಥಳಾಂತರವಾಗುವುದಕ್ಕೆ ಕೇಂದ್ರ ಸರ್ಕಾರ ಜವಾಬ್ದಾರಿಯಲ್ಲ. ಅದಕ್ಕೆ ಮಹಾರಾಷ್ಟ್ರ ಸರ್ಕಾರದ ಭ್ರಷ್ಟಾಚಾರ, ಕೆಟ್ಟ ಆಡಳಿತವೇ ಕಾರಣ’ ಎಂದು ಹೇಳಿದರು.
ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ ಹೆಚ್ಚಾದ ಕಾರಣ ಕಲಾಪವನ್ನು ಮತ್ತೆ ಮುಂದೂಡಲಾಗಿದೆ.