ಲಖನೌ: ಉತ್ತರದ ಪ್ರದೇಶದ ಕಾನೂನು ಸುವ್ಯವಸ್ಥೆ ಇಡೀ ದೇಶ ಹಾಗೂ ಜಗತ್ತಿಗೆ ಮಾದರಿ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಹೇಳಿದ್ದಾರೆ.
ಪೊಲೀಸ್ ಆಧುನೀಕರಣ ಯೋಜನೆಯ ಭಾಗವಾಗಿ ಉತ್ತರ ಪ್ರದೇಶದ 56 ಜಿಲ್ಲೆಗಳಿಗೆ ಆಧುನಿಕ ಜೈಲು ವಾಹನ ಬಿಡುಗಡೆಗೊಳಿಸಿ ಮಾತನಾಡಿದ ಆದಿತ್ಯನಾಥ್, ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಶ್ಲಾಘಿಸಿದರು.
2017ರ ಮೊದಲು ರಾಜ್ಯದಲ್ಲಿ ಗಲಭೆ, ಅರಾಜಕತೆ, ಗೂಂಡಾಗಿರಿ ಜಾಸ್ತಿಯಾಗಿತ್ತು. ಆದರೆ ಈಗ ಕಾನೂನು ಸುವ್ಯವಸ್ಥೆ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಈ ಹಿಂದೆ ಹಳೆಯ ವಾಹನಗಳಲ್ಲಿ ಕೈದಿಗಳನ್ನು ಕರೆದೊಯ್ಯಲಾಗುತ್ತಿತ್ತು. ಅದರಲ್ಲಿ ಬೇಕಾದಷ್ಟು ಸೌಲಭ್ಯಗಳಿರಲಿಲ್ಲ. ಇದರಿಂದ ಕೈದಿಗಳು ಪರಾರಿಯಾಗುತ್ತಿದ್ದರು. ಬೇರೆ ಗ್ಯಾಂಗ್ಗಳು ವಾಹನಕ್ಕೆ ದಾಳಿ ಮಾಡಿ ಕೈದಿಗಳಿಗೆ ಪರಾರಿಯಾಗಲು ನೆರವಾಗುತ್ತಿದ್ದರು ಎಂದು ಹೇಳಿದ್ದಾರೆ.
ಆದರೆ ಹೊಸತಾದ ಜೈಲು ವಾಹನದಲ್ಲಿ ಆಧುನಿಕ ತಂತ್ರಜ್ಞಾನ ಆಳವಡಿಸಲಾಗಿದ್ದು, ಜೈಲಿನಿಂದ ನ್ಯಾಯಾಲಯಕ್ಕೆ ಮತ್ತು ನ್ಯಾಯಾಲಯದಿಂದ ಜೈಲಿಗೆ ಹೋಗುವಾಗ ಪೊಲೀಸ್ ಸಿಬ್ಬಂದಿಯ ಭದ್ರತೆಯನ್ನು ಖಾತ್ರಿಪಡಿಸಿದ್ದೇವೆ ಎಂದು ಹೇಳಿದ್ದಾರೆ.