ಕಟಿಹಾರ್ (ಪಿಟಿಐ): ಬಿಹಾರದ ಕಟಿಹಾರ್ ಜಿಲ್ಲೆಯಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ನ್ಯೂ ಜಲ್ಪೈಗುರಿಯಿಂದ ಹೌರಾಗೆ ಹೊರಟಿದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.
ಬೆಳಿಗ್ಗೆ ಬೋಗಿಗೆ ಕಲ್ಲು ಅಪ್ಪಳಿಸಿದೆ ಎಂದು ಪ್ರಯಾಣಿಕರು ದೂರು ನೀಡಿದರು. ಜಿಲ್ಲೆಯ ಬಲರಾಂಪುರ ಪೊಲೀಸ್ ಠಾಣೆ ಪ್ರದೇಶದ ದಲ್ಖೋಲಾ ಮತ್ತು ತೆಲ್ಟಾ ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ ಎಂದು ಕಟಿಹಾರ್ ರೈಲ್ವೆ ವಿಭಾಗದ ಹಿರಿಯ ಭದ್ರತಾ ಆಯುಕ್ತ ಕಮಲ್ ಸಿಂಗ್ ತಿಳಿಸಿದ್ದಾರೆ.
ದಲ್ಖೋಲಾದಲ್ಲಿ ರೈಲ್ವೆ ಅಧಿಕಾರಿಗಳು ಬೋಗಿ ಪರಿಶೀಲಿಸಿದ ವೇಳೆ ಕಿಟಕಿ ಗಾಜುಗಳು ಬಿರುಕು ಬಿಟ್ಟಿರುವುದು ಕಂಡು ಬಂದಿದೆ. ಬಿಹಾರದಲ್ಲಿ ತಿಂಗಳಲ್ಲಿ ಎರಡನೇ ಬಾರಿಗೆ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ.