ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರುದ್ಯೋಗ: ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಸಂಸದ ವರುಣ್ ಗಾಂಧಿ ಕಿಡಿ

Last Updated 18 ಏಪ್ರಿಲ್ 2022, 4:22 IST
ಅಕ್ಷರ ಗಾತ್ರ

ಪಿಲಿಭಿತ್: ದೇಶದಲ್ಲಿ ಸುಮಾರು 1.5 ಕೋಟಿಯಷ್ಟು ಹುದ್ದೆಗಳು ಭರ್ತಿಯಾಗಬೇಕಿದ್ದರೂ, ನಿರುದ್ಯೋಗಿ ಯುವಕರು ಖಾಲಿ ಹೊಟ್ಟೆಯಲ್ಲಿಯೇ ಅಲೆದಾಡಬೇಕಾದ ಸ್ಥಿತಿ ಇದೆ ಎಂದುಬಿಜೆಪಿ ಸಂಸದ ವರುಣ್‌ ಗಾಂಧಿ ಭಾನುವಾರ ಹೇಳಿದ್ದಾರೆ.

ಲೋಕಸಭೆಯಲ್ಲಿ ತಾವು ಪ್ರತಿನಿಧಿಸುವ 'ಪಿಲಿಭಿತ್‌' ಕ್ಷೇತ್ರಕ್ಕೆ ಎರಡು ದಿನಗಳ ಭೇಟಿ ಸಲುವಾಗಿ ಆಗಮಿಸಿರುವ ಅವರು, ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕೋಟ್ಯಂತರ ನಿರುದ್ಯೋಗಿಗಳಿಗೆ ಮುಂದೆ ಏನಾಗಲಿದೆ ಎಂಬುದರ ಅರಿವೂ ಇಲ್ಲ ಎಂದು ಹೇಳಿದ್ದಾರೆ.

ದೇಶದಲ್ಲಿನ ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆಸಂಸದರು ನೀಡಿರುವ ಹೇಳಿಕೆಗಳನ್ನು ಅವರ (ವರುಣ್‌ ಗಾಂಧಿ) ವಕ್ತಾರ ಎಂ.ಆರ್‌.ಮಲಿಕ್‌ ಪ್ರಕಟಿಸಿದ್ದಾರೆ.

'ನಮ್ಮ ಹೋರಾಟ ನಿರುದ್ಯೋಗ ಮತ್ತು ಆರ್ಥಿಕ ಅಸಮಾನತೆಯ ವಿರುದ್ಧ. ಪ್ರತಿಯೊಬ್ಬರಿಗೂ ಸಮಾನ ಆರ್ಥಿಕ ಅವಕಾಶಗಳು ಲಭಿಸಬೇಕು ಎಂದು ನಮ್ಮ ಸಂವಿಧಾನ ಹೇಳುತ್ತದೆ. ಎಲ್ಲರೊಂದಿಗೆ ಕೂಡಿ ಕೆಲಸ ಮಾಡಿದಾಗ ಮಾತ್ರವೇ ಅದು ಸಾಧ್ಯವಾಗುತ್ತದೆ' ಎಂದು ವರುಣ್‌ ಗಾಂಧಿ ತಿಳಿಸಿದ್ದಾರೆ.

'ಯಾರೊಬ್ಬರ ಬ್ಯಾಂಕ್‌ ಖಾತೆಗೂ ಹಣ ಬಂದಿಲ್ಲ. ಆಶ್ವಾಸನೆ ನೀಡಿದ್ದ ಹಾಗೆ 2 ಕೋಟಿ ಉದ್ಯೋಗವೂ ಸೃಷ್ಟಿಯಾಗಿಲ್ಲ. ರೈತರ ಆದಾಯ ದ್ವಿಗುಣಗೊಳಿಸಲಾಗುವುದು ಎಂಬ ಭರವಸೆಯೂ ಈಡೇರಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಣ್ಣಾ ಹಜಾರೆ ಅವರ ಹೋರಾಟ ಮತ್ತು ದೆಹಲಿ ಗಡಿಗಳಲ್ಲಿ ನಡೆದ ರೈತರ ಪ್ರತಿಭಟನೆ ಬಗ್ಗೆಯೂ ಉಲ್ಲೇಖಿಸಿರುವ ವರುಣ್‌, 'ಹೋರಾಟಗಾರರೊಂದಿಗೆ ಕುಳಿತು, ಅಣ್ಣಾ ಹಜಾರೆ ಅವರ ಹೋರಾಟವನ್ನು ಬೆಂಬಲಿಸಿದ ಮೊದಲ ಸಂಸದ ನಾನು. ರೈತರ ಪ್ರತಿಭಟನೆಗಳು ನಡೆದಾಗ, ಅಧಿಕಾರಿಗಳನ್ನು ಕರೆದು ರೈತರ ಬೇಡಿಕೆಗಳತ್ತ ಗಮನಹರಿಸುವಂತೆ ಸೂಚನೆ ನೀಡಿದ್ದೆ' ಎಂದು ಹೇಳಿಕೊಂಡಿದ್ದಾರೆ.

'ನಮ್ಮ ನಿಜವಾದ ಹೋರಾಟ ನಿರುದ್ಯೋಗ ಮತ್ತು ಭ್ರಷ್ಟಾಚಾರದ ವಿರುದ್ಧ. ರಾಜಕೀಯ ಪಕ್ಷಗಳು ಮತ್ತು ನಾಯಕರು ತಮ್ಮ ದ್ವೇಷವನ್ನು ತೊರೆದು ದೇಶದ ಭವಿಷ್ಯದ ಬಗ್ಗೆ ಆಲೋಚಿಸಬೇಕು. ದೇಶದ ಭವಿಷ್ಯವನ್ನು ಭಾಷಣಗಳಿಂದ ಕಟ್ಟಲು ಸಾಧ್ಯವಿಲ್ಲ. ಅಥವಾ ಚುನಾವಣೆಗಳಲ್ಲಿನ ಗೆಲವು ಮತ್ತು ಸೋಲಿನಿಂದಲೂ ಅಲ್ಲ. ನಿಜವಾದ ಸೇವೆಯಿಂದ ದೇಶದ ಭವಿಷ್ಯ ನಿರ್ಮಿಸಬಹುದು' ಎಂದು ಹೇಳಿದ್ದಾರೆ.

ಮುಂದುವರಿದು,'ದೇಶದ ಭವಿಷ್ಯ ವಿಚಾರವಾಗಿ ಕಳವಳಗೊಂಡಿದ್ದೇನೆ. ಕನಸುಗಳು ದೊಡ್ಡವಿವೆ. ಆದರೆ, ಸಂಪನ್ಮೂಲಗಳು ಮಾತ್ರ ಸೀಮಿತವಾಗಿವೆ. ಯಾವಾಗ ಖಾಸಗೀಕರಣವಾಗುತ್ತದೋ, ಆಗ ಉದ್ಯೋಗಾವಕಾಶಗಳು ಸೀಮಿತಗೊಳ್ಳುತ್ತವೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತದೆ' ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇಲ್ಲಿನಖಮಾರಿಯಾ ಸೇತುವೆ ಬಳಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ ವರುಣ್‌ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಅವರ ಭಾಷಣ ಕೇಳಲು ಸಾವಿರಾರು ಕಾರ್ಯಕರ್ತರು ನೆರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT