ಚೆನ್ನೈ: ನಾಲ್ಕು ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಐಎಡಿಎಂಕೆ ಮಾಜಿ ನಾಯಕಿ, ವಿ.ಕೆ. ಶಶಿಕಲಾ ಅವರಿಗೆ ಜ್ವರ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಅವರನ್ನು ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
‘ನನ್ನ ಕಕ್ಷಿದಾರ ವಿ.ಕೆ.ಶಶಿಕಲಾ ಅವರಿಗೆ ಅನಾರೋಗ್ಯವಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಅವರಿಗೆ ಜ್ವರ ಮತ್ತು ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ ಎಂದು ಜೈಲಿನಿಂದ ಮಾಹಿತಿ ದೊರೆತಿದೆ’ ಎಂದು ಶಶಿಕಲಾ ಅವರ ವಕೀಲ ಎನ್.ರಾಜಾ ಸೆಂಥೂರ್ ಪಾಂಡಿಯನ್ ‘ಡೆಕ್ಕನ್ ಹೆರಾಲ್ಡ್’ಗೆ ತಿಳಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಮತ್ತು ಶಶಿಕಲಾ ಸೇರಿ ನಾಲ್ವರು ದೋಷಿಗಳು ಎಂದು 2014ರಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಶಶಿಕಲಾ ಅವರು 2017ರ ಫೆ.15ರಂದು ಜೈಲು ಅಧಿಕಾರಿಗಳಿಗೆ ಶರಣಾಗಿದ್ದರು.
ಶಶಿಕಲಾ ಅವರು ತಮ್ಮ ಶಿಕ್ಷೆ ಅವಧಿ ಪೂರ್ಣಗೊಳಿಸಿ ಜನವರಿ 27ರ ಬೆಳಗ್ಗೆ ಬಿಡುಗಡೆಯಾಗಲಿದ್ದಾರೆ ಎಂದು ವಕೀಲ ಪಾಂಡಿಯನ್ ಇತ್ತೀಚೆಗೆ ಹೇಳಿದ್ದರು.
‘ಶಶಿಕಲಾ ಅವರನ್ನು ತಪಾಸಣೆ ನಡೆಸಲಾಗಿದೆ. ಬೇರೆ ಯಾವುದೇ ಸಂಕೀರ್ಣ ಸಮಸ್ಯೆಗಳು ಅವರಲ್ಲಿ ಕಾಣಿಸಿಕೊಂಡಿಲ್ಲ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಉಸಿರಾಟದ ಸಮಸ್ಯೆ ಮತ್ತು ಜ್ವರ ಇರುವುದರಿಂದ ಕೋವಿಡ್ ಪರೀಕ್ಷೆಗೆ ಮಾದರಿಗಳನ್ನು ರವಾನಿಸಲಾಗಿದೆ. ಪರೀಕ್ಷೆಯ ವರದಿ ಬಂದ ಬಳಿಕ ಅವರನ್ನು ಕಳುಹಿಸಲಾಗುತ್ತದೆ’ ಎಂದು ಆಸ್ಪತ್ರೆಯ ನಿರ್ದೇಶಕ ಮನೋಜ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.