ಲಖನೌ:ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತವರು ನಗರ ಗೋರಖ್ಪುರದಲ್ಲಿ ಸುಮಾರು 12ರಷ್ಟು ವಾರ್ಡ್ಗಳಿಗೆ ಹಿಂದೂ ನಾಯಕರು, ಸಂತರು ಮತ್ತು ಕವಿಗಳ ಹೆಸರುಗಳೊಂದಿಗೆ ಮರುನಾಮಕಣ ಮಾಡಲಾಗಿದೆ.
ಗೋರಖ್ಪುರ ಮಹಾನಗರ ಪಾಲಿಕೆ ಶನಿವಾರ ಹೊಸ ಹೆಸರುಗಳೊಂದಿಗೆ ವಾರ್ಡ್ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಮಿಯಾನ್ ಬಜಾರ್, ಅಲಿನಗರ, ಮುಫ್ತಿಪುರ್, ತುರ್ಕಮೆನ್ಪುರ್, ಇಸ್ಮಾಯಿಲ್ಪುರ, ರಸೂಲ್ಪುರ್, ಹುಮಾಯೂನ್ಪುರ್ ಉತ್ತರ, ದಾವೂದ್ ಪುರ್, ಇಲಾಹಿ ಬಾಗ್, ಕ್ವಾಜಿಪುರ್ ಖುರ್ದ್ ಮತ್ತು ಇತರೆ ಕೆಲ ವಾರ್ಡ್ಗಳಿಗೆ ಮರು ನಾಮಕರಣ ಮಾಡಲಾಗಿದೆ.
ಮುಸ್ಲಿಂ ಹೆಸರಿನ ಕೆಲ ವಾರ್ಡ್ಗಳಿಗೆ ಸ್ವಾತಂತ್ರ್ಯ ಹೋರಾಟಗಾರರಾದ ಸರ್ದಾರ್ ಭಗತ್ ಸಿಂಗ್ ಮತ್ತು ರಾಮ್ ಪ್ರಸಾದ್ ಬಿಸ್ಮಿಲ್, ಭಗವಾನ್ ಹನುಮಾನ್, ದಿಗ್ವಿಜಯ್ ನಾಥ್ ಎಂದು ಮರು ನಾಮಕರಣ ಮಾಡಲಾಗಿದೆ. ದಾವೂದ್ ಪುರ್ ವಾರ್ಡ್ ಅನ್ನು ಪ್ರಸಿದ್ಧ ಉರ್ದು ಕವಿ ರಘುಪತಿ ಸಹಾಯ್ ಅಲಿಯಾಸ್ ಫಿರಾಕ್ ಗೋರಖಪುರಿ ಎಂದು ಹೆಸರಿಡಲಾಗಿದೆ.
ವಾರ್ಡ್ಗಳ ಮರುನಾಮಕರಣದ ಹಿಂದೆ ಯಾವುದೇ 'ಉದ್ದೇಶ' ಇದೆ ಎಂಬ ಸಮರ್ಥನೆಯನ್ನು ಜಿಲ್ಲಾ ಅಧಿಕಾರಿಗಳು ತಿರಸ್ಕರಿಸಿದರು. ‘ಹಿಂದೂ ಹೆಸರಿನ ಹಲವು ವಾರ್ಡ್ಗಳಿಗೆ ಮರು ನಾಮಕರಣ ಮಾಡಲಾಗಿದೆ’ ಎಂದು ಗೋರಖ್ಪುರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.