ತಿರುವನಂತಪುರ: ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಯಶವಂತ್ ಸಿನ್ಹಾ, ದೇಶಕ್ಕೆ ಚಿಂತಿಸುವ, ಮಾತನಾಡುವ ರಾಷ್ಟ್ರಪತಿಯ ಅಗತ್ಯವಿದ್ದು, ರಬ್ಬರ್ ಸ್ಟ್ಯಾಂಪ್ ಅಲ್ಲ ಎಂದು ಶುಕ್ರವಾರ ಹೇಳಿದ್ದಾರೆ.
ಎನ್ಡಿಎ ತನ್ನ ಅಭ್ಯರ್ಥಿಯಾಗಿ ದ್ರೌಪತಿ ಮುರ್ಮು ಅವರನ್ನು ಆಯ್ಕೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೀತಿಯನ್ನು ಟೀಕಿಸಿರುವ ಸಿನ್ಹಾ, ದೇಶಕ್ಕೆ ಸಂವಿಧಾನದ ನಿಷ್ಪಕ್ಷಪಾತ ಪಾಲಕನಾಗಿ ಕಾರ್ಯನಿರ್ವಹಿಸುವ ರಾಷ್ಟ್ರಪತಿಯ ಅಗತ್ಯವಿದೆ ಹೊರತು ಸರ್ಕಾರ ಹೇಳಿದಂತೆ ರಬ್ಬರ್ ಸ್ಟ್ಯಾಂಪ್ನಂತೆ ಕಾರ್ಯನಿರ್ವಹಿಸುವವರಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ರಾಷ್ಟ್ರಪತಿ ತಮ್ಮದೇ ಆದ ಚಿಂತನೆಯನ್ನು ಹೊಂದಿರಬೇಕು. ಗಣರಾಜ್ಯದ ಕಾರ್ಯಾಂಗ ಅಥವಾ ಯಾವುದೇ ವ್ಯವಸ್ಥೆ ಸಾಂವಿಧಾನಿಕ ತತ್ವಗಳಿಂದ ವಿಚಲನಗೊಂಡಾಗೆಲ್ಲಾ ಅದನ್ನು ಭಯ, ಪಕ್ಷಪಾತವಿಲ್ಲದೆ ಆತ್ಮಸಾಕ್ಷಿಯಾಗಿ ಬಳಕೆ ಮಾಡಬೇಕು ಎಂದು ಹೇಳಿದರು.
ಸಂವಿಧಾನ ರಚನಾಕಾರರ ದೂರದೃಷ್ಟಿಗೆ ಯೋಗ್ಯವಾದ ರಾಷ್ಟ್ರಪತಿಯಾಗಿ ನಾನು ಸೇವೆ ಸಲ್ಲಿಸುತ್ತೇನೆ ಎಂದು ದೇಶದ ಜನತೆಗೆ ಭರವಸೆ ನೀಡುತ್ತೇನೆ ಎಂದು ತಿಳಿಸಿದರು.
ಸೇನಾ ನೇಮಕಾತಿಗಾಗಿ ಕೇಂದ್ರ ಸರ್ಕಾರವು ಹೊಸದಾಗಿ ಆರಂಭಿಸಿರುವ 'ಅಗ್ನಿಪಥ' ಯೋಜನೆಯನ್ನು ಯಶವಂತ್ ಸಿನ್ಹಾ ಟೀಕಿಸಿದರು. ಇದು ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುವ ವಿಧಾನ ಅಲ್ಲ ಎಂದು ಹೇಳಿದರು.