ಕೋಲ್ಕತ್ತ: ನಾವು ಸೋಲುವುದನ್ನು ಕಲಿತಿಲ್ಲ. ಜೈಲು ಅಥವಾ ಇನ್ಯಾವುದನ್ನೋ ಮುಂದಿಟ್ಟುಕೊಂಡು ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಅಂತರರಾಷ್ಟ್ರೀಯ ಮಾತೃಭಾಷಾ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜೈಲಿನ ಹೆಸರಿನಲ್ಲಿ ನಮ್ಮನ್ನು ಹೆದರಿಸಲು ಯತ್ನಿಸಬೇಡಿ. ನಾವು ಬಂದೂಕಿನ ವಿರುದ್ಧ ಹೋರಾಡಿದವರು. ಇಲಿಗಳ ವಿರುದ್ಧ ಹೋರಾಡಲು ಹೆದರುವುದಿಲ್ಲ ಎಂದು ಯಾವುದೇ ಪಕ್ಷ ಅಥವಾ ವ್ಯಕ್ತಿಯ ಬಗ್ಗೆ ಹೆಸರಿಸದೇ ಹೇಳಿದ್ದಾರೆ.
‘ನನ್ನಲ್ಲಿ ಜೀವ ಇರುವವರೆಗೆ ನಾನು ಯಾರ ಬೆದರಿಕೆಗೂ ಜಗ್ಗುವುದಿಲ್ಲ’ ಎಂದೂ ಮಮತಾ ಹೇಳಿದ್ದಾರೆ.
ಕಲ್ಲಿದ್ದಲು ಅಕ್ರಮ ಪ್ರಕರಣದಲ್ಲಿ ಟಿಎಂಸಿ ಸಂಸದರೊಬ್ಬರು ಮತ್ತು ಮಮತಾ ಬ್ಯಾನರ್ಜಿಯವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿಗೆ ಸಿಬಿಐ ನೋಟಿಸ್ ನೀಡಿದೆ. ಇದಾದ ಬಳಿಕ ಮಮತಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
‘2021ರ ಸವಾಲಿಗೆ ಸಿದ್ಧ, ಯಾರ ಶಕ್ತಿ ಹೆಚ್ಚು ಎಂಬುದನ್ನು ನೋಡೋಣ. 2021ರಲ್ಲಿ ಒಂದೇ ಒಂದು ಪಂದ್ಯ ಇರಲಿದೆ. ನಾನೇ ಗೋಲ್ಕೀಪರ್ ಆಗಿರಲಿದ್ದೇನೆ. ಯಾರು ಗೆಲ್ಲುತ್ತಾರೋ ಯಾರು ಸೋಲುತ್ತಾರೋ ನೋಡೋಣ. ನಾವು ಸೋಲುವುದನ್ನು ಕಲಿತಿಲ್ಲ. ಅವರು ನಮ್ಮನ್ನು ಸೋಲಿಸುವುದು ಸಾಧ್ಯವಿಲ್ಲ’ ಎಂದು ಮಮತಾ ಹೇಳಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ನಡುವಣ ವಾಕ್ಸಮರ ತಾರಕಕ್ಕೇರಿದೆ.