ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎರಡಂಕಿಯನ್ನೂ ದಾಟಲು ಸಾಧ್ಯವಿಲ್ಲ. ಒಂದು ವೇಳೆ ಚುನಾವಣೆಯಲ್ಲಿ 200 ಸ್ಥಾನಗಳನ್ನು ಪಡೆಯುವಲ್ಲಿ ಬಿಜೆಪಿ ವಿಫಲವಾದರೆ, ಪಕ್ಷದ ನಾಯಕರು ತಮ್ಮ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಿದ್ದಾರೆಯೇ ಎಂದು ಚುನಾವಣಾ ನೀತಿನಿರೂಪಕ ಪ್ರಶಾಂತ್ ಕಿಶೋರ್ ಅವರು ಸವಾಲು ಹಾಕಿದ್ದಾರೆ.
‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿಯನ್ನೂ ದಾಟುವುದು ಕಷ್ಟ, ಬಿಜೆಪಿ 100 ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯಲಿದೆ. ಒಂದು ವೇಳೆ ಅವರು ಎರಡಂಕಿಯನ್ನು ಮೀರಿ ಸ್ಥಾನಗಳನ್ನು ಗೆದ್ದರೆ, ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಅವರು ಹೇಳಿದ್ದಾರೆ.
2014ರಲ್ಲಿ ಪ್ರಧಾನಿ ಸ್ಥಾನಕ್ಕಾಗಿ ನರೇಂದ್ರ ಮೋದಿ ಪರ ಪ್ರಶಾಂತ್ ಕಿಶೋರ್ ಅವರು ನಡೆಸಿದ್ದ ಅಭಿಯಾನವು ಯಶಸ್ವಿಯಾಗಿತ್ತು. ಆದರೆ ಇದೀಗ ಮುಂದಿನ ವರ್ಷ ಏಪ್ರಿಲ್–ಮೇ ತಿಂಗಳಿನಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪರ ಪ್ರಚಾರದಲ್ಲಿಪ್ರಶಾಂತ್ ಕಿಶೋರ್ ಅವರು ನಿರತರಾಗಿದ್ದಾರೆ.
ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಿಜೆಪಿ ಎರಡಂಕಿಯನ್ನೂ ದಾಟುವುದು ಕಷ್ಟ ಎಂದು ಸೋಮವಾರ ಪ್ರಶಾಂತ್ ಕಿಶೋರ್ ಅವರು ಟ್ವೀಟ್ ಮಾಡಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯಾ ಅವರು, ‘ಪಶ್ಚಿಮ ಬಂಗಾಳದಲ್ಲಿ ಎದ್ದಿರುವ ಬಿಜೆಪಿ ಸುನಾಮಿಯನ್ನು ಗಮನಿಸಿದರೆ, ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ದೇಶವು ಒಬ್ಬ ಚುನಾವಣಾ ನೀತಿನಿರೂಪಕನನ್ನು ಕಳೆದುಕೊಳ್ಳಲಿದೆ’ ಎಂದರು.